ಶಿವನು ಸತ್ಯವನ್ನರಿತ ದಿನ ಶಿವರಾತ್ರಿ! ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ

“ಶಿವನು ಸತ್ಯವನ್ನರಿತ ದಿನ ಶಿವರಾತ್ರಿ”

ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ

ಶಿವರಾತ್ರಿಯನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುತ್ತಾರೆ. ಶಿವರಾತ್ರಿ ಹಬ್ಬವೆಂದರೆ ಹಿಂದೂಗಳಿಗೆ ವಿಶೇಷವಾದ ಹಬ್ಬವೆಂದೆ ಹೇಳಬೇಕು. ಈ ದಿನದಂದೆ ಶಿವನು ಪಾರ್ವತಿಯನ್ನು ಮದುವೆಯಾಗಿದ್ದು ಎಂದೂ, ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ಶಿವನು ಭೂಮಿಗಿಳಿದು ಬರುತ್ತಾನೆ ಎಂಬುದಾಗಿಯೂ, ಶಿವನು ಲಿಂಗಧಾರಣೆ ಮಾಡಿದ ದಿನವೆಂದೂ, ಶಿವ ತಾಂಡವ ನೃತ್ಯ ಮಾಡಿದ ದಿನವೆಂದೂ, ಭಗೀರತನು ಶಿವನನ್ನು ಮೆಚ್ಚಿಸಿ ಗಂಗೆಯನ್ನು ಶಿವನ ಜಟೆಯಿಂದ ಭೂಮಿಗಿಳಿಸಿ ತನ್ನ ಮುತಾತಂದಿರಿಗೆ ಸ್ವರ್ಗವನ್ನು ಕಲ್ಪಿಸಿದ ದಿನವೆಂದೂ, ಸಮುದ್ರ ಮಥಂನದ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಹಾಲಾಹಲ ಎಂಬ ವಿಷ ಉತ್ಪತಿಯಾದಾಗ ಶಿವನು ಆ ವಿಷವನ್ನು ಕುಡಿಯಲು ಪಾರ್ವತಿ ಶಿವನ ಗಂಟಲನ್ನು ಹಿಡಿದುಕೊಂಡು ರಾತ್ರಿಯಿಡೀ ಕಳೆದುದರ ಸಂಕೇತವೆಂದೂ, ಹೀಗೆ ಅನೇಕ ಉಪ ಕಥೆಗಳು ಶಿವರಾತ್ರಿ ದಿನದ ವಿಶೇಷವಾಗಿದೆ.
ಚಳಿಗಾಲವು ಕಳೆದು ಸುಡು ಬೇಸಿಗೆ ಪ್ರಾರಂಭವಾಗುವ ಸಮಯ (ಫೆಬ್ರವರಿ-ಮಾರ್ಚ್) ತಿಂಗಳಲ್ಲಿ ಬರುವ ಹಬ್ಬವೆ ಶಿವರಾತ್ರಿ. ಶಿವ ಎಂದರೆ ಶುಭಕರ ಅಥವಾ ಮಂಗಳಕರ ಎಂದಾದರೆ, ರಾತ್ರಿ ಎಂಬುದು ಹಗಲಿಗೆ ವಿರುದ್ಧವಾದ ಇರುಳು ಎಂದರ್ಥ. ಆದ್ದರಿಂದ ಶಿವರಾತ್ರಿ ಎಂಬುದು ಮಂಗಳಕರವಾದ ರಾತ್ರಿಯೆಂದೂ ಹೇಳುತ್ತಾರೆ. ಶಿವನು ನಿದ್ರೆ ಮಾಡುವ ರಾತ್ರಿಯೆಂದೂ ಹೇಳುವವರಿದ್ದಾರೆ. ಇದರಲ್ಲಿ ಬ್ರಹ್ಮ ಮತ್ತು ವಿಷ್ಣು ಇಬ್ಬರು ತಾನು ಮೇಲು ಎಂದು ವಾದ ಮಾಡುತ್ತಾರೆಂದೂ, ಅದನ್ನು ಪರಿಹರಿಸಲು ಇಬ್ಬರು ಶಿವನ ಬಳಿ ಬಂದು ನಮ್ಮಿಬ್ಬರಲ್ಲಿ ಯಾರು ಶ್ರೇಷ್ಟರು ಎಂದು ಕೇಳಲು ಶಿವನು ಇವರ ಅಹಂಕಾರವನ್ನು ಮುರಿಯಲು ನನ್ನ ಮೊದಲು ಮತ್ತು ಕೊನೆಯನ್ನು ಹುಡುಕಿಕೊಂಡು ಬನ್ನಿ ಎಂದು ಕಳುಹಿಸಿದ. ಆಗ ಬ್ರಹ್ಮನು ಲಿಂಗದ ಆಳವನ್ನು ಹುಡುಕಲು ವಿಫಲನಾಗಿ ಕೇದಗಿ ಹೂವಿನ ಸಹಾಯ ಪಡೆದು ನಾನು ಶಿವನ ಲಿಂಗದ ಆಳವನ್ನು ಕಂಡಿರುವುದಾಗಿ ಸುಳ್ಳು ಹೇಳಿ ಕೊನೆಗೆ ಸಿಕ್ಕಿಬಿದ್ದ. ಹಾಗಾಗಿ ಶಿವನು ಬ್ರಹ್ಮನ ಪೂಜೆ ಮಾಡುವವರಿಗೆ ಅಕಾಲಿಕ ಮರಣ ಉಂಟಾಗುವುದೆಂದೂ, ಕೇದಗಿ ಹೂವನ್ನು ಯಾರೂ ಪೂಜೆಗೆ ಬಳಸ ಬಾರದೆಂದೂ ಶಾಪ ನೀಡಿದುದಾಗಿಯೂ ಒಂದು ಕಥೆಯಿದೆ.
ಶಿವರಾತ್ರಿಯು ಶಿವನಿಗೆ ಪ್ರಿಯವಾದ ದಿನವಾಗಿದ್ದು, ಅಂದು “ಯಾರು ಸರಳ, ನಿಷ್ಕಲ್ಮಷ ಮನಸ್ಸಿನಿಂದ ನನ್ನನ್ನು ಪೂಜಿಸುತ್ತಾರೋ ಅವರಿಗೆ ನಾನು ಅವರ ಇಷ್ಟಾರ್ಥಗಳನ್ನು ಪೂರೈಸುವುದಾಗಿ” ಶಿವನು ಪಾರ್ವತಿಗೆ ಹೇಳುವುದಾಗಿ ಶಿವ ಪುರಾಣದಲ್ಲಿ ತಿಳಿಸಲಾಗಿದೆ. ಶಿವರಾತ್ರಿಯಂದು ಉಪವಾಸ, ವ್ರತ, ಪೂಜೆ, ಧ್ಯಾನಾದಿಗಳಿಂದ ಶಿವನನ್ನು ಪೂಜಿಸುವುದರಿಂದ ಮನುಷ್ಯ ಜೀವನದಲ್ಲಿ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪ್ರಾಪ್ತವಾಗುತ್ತದೆಂದು ಹಿಂದುಗಳ ನಂಬಿಕೆಯಾಗಿದೆ. ಒಂದೆಡೆ ವಿವಾಹವಾಗದ ಹೆಣ್ಣುಮಕ್ಕಳು ಶಿವರಾತ್ರಿಯಂದು ಜಾಗರಣೆ, ಪೂಜೆಯನ್ನು ಮಾಡುವುದರಿಂದ ಶಿವನಂತಹ ಪತಿ ದೊರೆಯುವುದೆಂದೂ, ವಿವಾಹವಾದ ಪತ್ನಿಯರು ಪೂಜಿಸುವುದರಿಂದ ತನ್ನ ಪತಿಗೆ ಅಷ್ಟಐಶ್ವರ್ಯಗಳು ಲಭಿಸುವುದೆಂದೂ ನಂಬುತ್ತಾರೆ.

ಶಿವರಾತ್ರಿಯ ಬಗ್ಗೆಗಿನ ಒಂದು ರೋಚಕ ಕಥೆ:

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

‘ಶಿವನು ಸ್ವಯಂಭೂ’ ಏಕೆಂದರೆ ಅವನ ಸೃಷ್ಠಿಗೆ ನಿರ್ಧಿಷ್ಟವಾದ ಕ್ಷಣವಾಗಲಿ, ನಿರ್ಧಿಷ್ಟವಾದ ಮೂಲವಾಗಲಿ ಇಲ್ಲ. ಅವನು ತಾನಾಗೀಯೇ ಇದ್ದಾನೆ. ಶಿವ ಅನ್ನುವ ಪದದ ಅರ್ಥ ಏನೂ ಅಲ್ಲದೂ ಅಂತ. ಎನೂ ಅಲ್ಲದೂ ಒಂದು ನಿಗದಿತ ಸಮಯದಲ್ಲಾಗಲ್ಲಿ ಯಾವದರ ಮೂಲಕದಲ್ಲೂ ಸಂಭವಿಸಲ್ಲ ಅದು ಇದೆ ಅಷ್ಟೇ ಹಾಗಾಗಿ ಶಿವ ಇದ್ದ.
ಸೃಷ್ಠಿಕರ್ತ ಬ್ರಹ್ಮ ಸೃಷ್ಠಿಸಲು ಆರಂಭಿಸಿದ. ವಿವಧ ನಕ್ಷತ್ರ ಪುಂಜಗಳು, ಗ್ರಹಗಳು, ಜೀವಜಾತಿಗಳು, ಮನುಷ್ಯರು ಎಲ್ಲವೂ ಅವನಿಂದ ಹೊರಬಂತು. ಆಗ ನಿಶ್ಚಲವಾಗಿದ್ದ ಶಿವನು ತನ್ನ ಕಣ್ಣನ್ನು ತೆರದು ಸೃಷ್ಠಿಯನ್ನು ಗಮನಿಸಲು ಪ್ರಾರಂಭಿಸಿದ. ಅವನು ಸೃಷ್ಠಿಯನ್ನು ಅವಲೋಕಿಸುತ್ತಿದ್ದಂತೆ. ಆನ ಇಲ್ಲಾ ರೀತಿಯ ಕಷ್ಟ-ಕಾರ್ಪಣ್ಯ, ನೋವು ದುಃಖ ಸಂಕಟಗಳನ್ನು ಅನುಭವಿಸುತ್ತಿರುವುದು ನೋಡಿದ. ಅಲ್ಲೊಮ್ಮೆ ಇಲ್ಲೊಮ್ಮೆ ಸ್ವಲ್ಪ ಸುಖ ಸಂತೋಷ ಇತ್ತು ಅಷ್ಟೇ. ಶಿವ ಇದನ್ನು ನೋಡಿದಾಗ ಅವನಿಗೆ ಸೃಷ್ಠಿ ಇಷ್ಟವಾಗಲಿಲ್ಲ. ಅವನೂ ಸುತ್ತಲೂ ನೋಡಿದಾಗ ಬ್ರಹ್ಮ ತನ್ನ ಸೃಷ್ಠಿಯ ಬಗ್ಗೆ ಬಹಳ ಹೆಮ್ಮೆಪಡುತ್ತಿರುವುದು ಕಾಣಿಸುತ್ತದೆ.
ಬೃಹ್ಮನು ತನ್ನ ಸೃಷ್ಠಿಯನ್ನು ತುಂಬ ಗರ್ವ ಮತ್ತು ಆನಂದದಿಂದ ನೋಡುತ್ತಿದ್ದ. ತನ್ನ ಸೃಷ್ಠಿಯನ್ನು ನೋಡಲು ಬ್ರಹ್ಮ ಎರಡು ಕಣ್ಣು ಸಾಲದು ಎಂದು ಅನ್ನಿಸಿ ಇನ್ನೋಂದು ತಲೆಯನ್ನು ಹುಟ್ಟಿಸಿದ. ಹಾಗೇ ಸುತ್ತಲೂ ನೋಡಲು ನಾಲ್ಕು ಬದಿಯಲ್ಲಿ ನಾಲ್ಕು ತಲೆಗಳನ್ನು ಹುಟ್ಟಿಸಿಕೊಂಡ. ಬ್ರಹ್ಮನಿಗೆ ಅದೂ ಸಾಲದೆಂಬಂತೆ ಐದನೆ ತಲೆಯನ್ನು ಹುಟ್ಟಿಸಿದ. ಈ ಐದನೆ ತಲೆ ಏನನ್ನೂ ನೋಡಬೇಕುಂತ ಅಲ್ಲ. ತನ್ನ ಗರ್ವಕ್ಕಾಗಿ ಸುಮ್ಮನೆ ಹುಟ್ಟಿಸಿದ. ಬ್ರಹ್ಮ ಇಂತಹ ದರಿದ್ರವಾದ ಸೃಷ್ಠಿಯನ್ನು ನೋಡಿ ಹಿಗ್ಗುತ್ತಿರುವುದನ್ನು ಕಂಡ ಶಿವನಿಗೆ ಕೋಪ ಬಂತು. ಅವನು ಬ್ರಹ್ಮನ ಮೇಲೆ ದಾಳಿ ಮಾಡಿ ಅವನ ಐದನೆ ತಲೆಯನ್ನು ಕಿತ್ತು ಹಾಕಿದ.
ಬ್ರಹ್ಮನಿಗೆ ಈಗಿರುವುದು ನಾಲ್ಕೆ ತಲೆಗಳು. ಬ್ರಹ್ಮ ನೋವಿನಿಂದ ಚೀರಿ “ಹೀಗೆ ಹ್ಯಾಕೆ ಮಾಡುತ್ತಿದ್ದಿಯಾ ಅಂತ ಕೇಳಿದ” ಅದಕ್ಕೆ ಶಿವ “ನಿನ್ನ ಸೃಷ್ಠಿ ಬಗ್ಗೆ ನಿನಗೆ ನಾಚಿಕೆಯಾಗಲ್ಲವಾ… ಎಲ್ಲರೂ ದುಃಖ ಪಡುತ್ತಿದ್ದಾರೆ. ಜನ ಎಲ್ಲಾ ತರಹದ ನೋವು ನರಳಾಟ ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ” ಅಂದ.
ಬ್ರಹ್ಮ ಹೇಳಿದ: ನಾನು ನೋವನ್ನು ಸೃಷ್ಠಿಸಲಿಲ್ಲ, ನಲಿವನ್ನು ಸೃಷ್ಠಿಸಲಿಲ್ಲ. ನಾನು ಸೃಷ್ಠಿಸಿದ್ದಿನಿ ಅಷ್ಟೇ. ಜನ ಹೇಗೆ ಜೀವಿಸುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅದಿರುವುದು ಅವರ ಮನಸ್ಸಿನಲ್ಲಿ.
ಶಿವ ಅಂದ: ಮನಸ್ಸನ್ನು ಸೃಷ್ಠಿಸಿದ್ದು ಯಾರು? ಅದೂ ನಿನ್ನದೆ ಸೃಷ್ಠಿ.
ಬ್ರಹ್ಮ ಅಂದ: ಮನಸ್ಸಿಗೆ ತನ್ನದೆ ಆದ ಗುಣ ಲಕ್ಷಣಗಳಿಲ್ಲ ಅದು ಇದೆ ಅಷ್ಟೆ. ಜನ ಅದರಿಂದ ಸಂತೋಷವನ್ನು ಮಾಡ್ಕೋಬಹುದು ಅಥವಾ ದುಃಖವನ್ನು ಮಾಡ್ಕೋಬಹುದು ಅಥವಾ ಪರಮಾನಂದವನ್ನು ಮಾಡ್ಕೋಬಹುದು. ಅದು ಅವರಿಗೆ ಬಿಟ್ಟಿದ್ದು.
ಇದನ್ನು ಕೇಳಿ ಶಿವನು ಕೂತು ಸೃಷ್ಠಿಯನ್ನು ಗಹನವಾಗಿ ಅವಲೋಕಿಸಿದ. ಎಲ್ಲಾ ಜೀವಿಗಳನ್ನು ಗಮನಿಸಿದ. ಆ ಮೇಲೆ ಅವನಿಗೆ ತನ್ನದೆ ಮನಸ್ಸನ್ನು ತಿಲ್ಕೋಬೇಕಿತ್ತು. ಹಾಗಾಗಿ ಕಣ್ಣು ಮುಚ್ಚಿ ಕೂತು ತನ್ನದೇ ಸ್ವರೂಪವನ್ನ ತನ್ನ ಮನಸ್ಸಿನ ಸ್ವರೂಪವನ್ನ ನೋಡ ತೊಡಗಿದ. ಅವನಿಗೆ ಮನವರಿಕೆಯಾಯಿತು. ವಾಸ್ತವತೆಯಲ್ಲಿ ಸೃಷ್ಠಿಗೆ ಗುಣ ಲಕ್ಷಣವಿಲ್ಲ. ಪ್ರತಿಯೊಬ್ಬರು ತಮಗೆ ಬೇಕುವುದನ್ನ ಸೃಜಿಸಬಹುದು. ಮನಸ್ಸಿಗೂ ಲಕ್ಷಣ ರಹಿತವಾದದ್ದು ಎಂದು ಅವನಿಗೆ ಮನವರಿಕೆಯಾದಗ ಈ ಸಾಕ್ಷಾತ್ಕಾರ ನಿಚ್ಚಲವಾದಗ ಅವನು ಭಾವೋತ್ಕರ್ಷನಾದ. ಎಷ್ಟು ಆನಂದ ಪರವಸನಾದ ಅಂದರೆ ಎದ್ದು ನಿಂತು ಕುಣಿಯೋಕೆ ಆರಂಭಿಸಿದ. ಹುಚ್ಚೆದ್ದು ಕುಣಿದ. ಅವನು ಸಂಪೂರ್ಣವಾಗಿ ತೊಡಗಿಕೊಂಡು ತೀವ್ರವಾಗಿ ಕುಣಿಯುತ್ತಿರಬೇಕಾದರೆ ಅವನ ದೇಹದ ಪ್ರತಿಯೊಂದು ಕೇಶವು ತನ್ನಲ್ಲೆ ಒಂದು ನೃತ್ಯವಾಗಿದ್ದಾಗ ಇದ್ದಕ್ಕಿದ್ದಂತೆ ಈ ನೃತ್ಯದ ಅಗತ್ಯವು ಇಲ್ಲ ಅನ್ನೋದು ಮನದಟ್ಟಾಯಿತು. ನೃತ್ಯದ ಪರಾಕಷ್ಠತೆಯಲ್ಲಿ ನಿಶ್ಚಲತೆ ಇದೆ. ಅನ್ನೋದನ್ನ ಗಮನಿಸಿದ. ಹಾಗಾಗಿ ಅವನು ತಪಸ್ವಿಯ ತರಹ ಅಚಲವಾಗಿ ಸಂಪೂರ್ಣ ಸ್ಥಬ್ದನಾಗಿ ಕೂತ. ಆ ನಿಶ್ಚಲತೆ ಮಹಾ ಶಿರಾತ್ರಿಯ ಈ ರಾತ್ರಿಯಂದು ಸಂಭವಿಸಿತು ಎಂದು ಹೇಳುತ್ತಾರೆ.
ಆಡಂಬರ ಪ್ರಿಯನಲ್ಲದ, ಮೈತುಂಬಾ ವಿಭೂತಿಯನ್ನು ಬಳಿದು, ಹುಲಿಚರ್ಮವನ್ನು ಸುತ್ತಿಕೊಂಡು, ಹಾವನ್ನು ಕೊರಳಿಗೆ ತಾಕಿಕೊಂಡು, ಸದಾ ಕಾಲವು ಧ್ಯಾನದಲ್ಲಿಯೇ ಕುಳಿತಿರುವ ಶಿವನನ್ನು ಕೇವಲ ಪಂಚಾಕ್ಷರಿ ಮಂತ್ರವಾದ ‘ಓಂ ನಮಃ ಶಿವಾಯ’ದಿಂದಲೂ ಒಲಿಸಿಕೊಳ್ಳಬಹುದೆಂದು ಋಷಿಮುನಿಗಳು ಹೇಳುತ್ತಾರೆ. ಭಕ್ತ ಮಾರ್ಕಾಂಡೆಯ, ಭಕ್ತ ಕುಂಬಾರ, ಬೇಡರ ಕಣ್ಣಪ್ಪ, ಭಕ್ತ ಸಿರಿಯಾಳ ಮುಂತಾದ ಭಕ್ತರು ಶಿವವನ್ನು ಒಲಿಸಿಕೊಂಡು ಅಮರರಾಗಿದ್ದಾರೆ. ಆದ್ದರಿಂದ ಶಿವರಾತ್ರಿಯಂದು ನಾವೂ ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡೋಣ. ಸರ್ವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಆದಿಯೋಗಿ ಶಿವನು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶಿಸುತ್ತೇನೆ. ‘ಓಂ ನಮಃ ಶಿವಾಯ’

. ಕಾನತ್ತಿಲ್ ರಾಣಿ ಅರುಣ್

admin

0 0 votes
Article Rating
Subscribe
Notify of
guest
0 Comments
Inline Feedbacks
View all comments