ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯ Sri Bhagandeshwara – Talacauvery Temple Coorg

updated on: 01-10-2022

ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು

ಅಕ್ಟೋಬರ್ 17ರಂದು ಸಂಜೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ.
2022ರ ಅಕ್ಟೋಬರ್ 17ರ ಸಂಜೆ 7.21 ಕ್ಕೆ ತೀರ್ಥೋದ್ಭವವಾಗಲಿದೆ.
ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವದಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ.

ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯ

ಪ್ರಾಸ್ತಾವಿಕ

ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು 46 ಕಿ.ಮೀಗಳ ದೂರದಲ್ಲಿದೆ. ಶ್ರೀ ಕಾವೇರಿಯು ಭಾರತದ 7 ಪುಣ್ಯ ತೀರ್ಥಗಳಲ್ಲಿ ಒಂದು. ಇದನ್ನು ದಕ್ಷಿಣ ಗಂಗಾ ಎಂದೂ ಕರೆಯುತ್ತಾರೆ. ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ’ ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ. ಕಾವೇರಿಯ ಉಗಮಸ್ಥಾನ ಒಂದು ಪುಟ್ಟ ಕೊಳ. ಇದನ್ನು ಕುಂಡಿಕೆ ಎನ್ನುತ್ತಾರೆ. ಇದರ ಪಕ್ಕದಲ್ಲಿ ಉತ್ತರಕ್ಕೆ ಎತ್ತರದ ಒಂದು ಮಂಟಪವಿದೆ. ಕುಂಡಿಗೆಯ ಮುಂದೆ ಒಂದು ಸಣ್ಣ ಕೊಳವಿದೆ. ಕುಂಡಿಗೆಯಿಂದ ಹೊರಟ ನೀರು ಸಣ್ಣ ಕೊಳ ಸೇರಿ ಅಂತರ್ಗಾಮಿಯಾಗಿ ಹರಿದು ಇನ್ನೊಂದು ಕೊಳವನ್ನು ತುಂಬುತ್ತದೆ. ಪುನಃ ನೀರು ಅಂತರ್ಗಾಮಿಯಾಗಿ ಹರಿದು ಕಣಿವೆಯಲ್ಲಿ ಕಾಣಿಸಿಕೊಂಡು ಮುಂದೆ ಹರಿಯುತ್ತದೆ. ಕುಂಡಿಗೆಯಲ್ಲಿ ಕಾವೇರಿ ತೀರ್ಥ ಉದ್ಭವವಾಗುವುದೆಂದು ನಂಬಿಕೆಯಿದೆ.ಶ್ರೀ ಕಾವೇರಿ ನದಿಯ ಮೂಲ ತಲಕಾವೇರಿ. ತಲಕಾವೇರಿಯು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಬ್ರಹ್ಮಗಿರಿ ಬೆಟ್ಟ ಪಶ್ಚಿಮ ಘಟ್ಟದ ಒಂದು ಭಾಗವಾಗಿದ್ದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. 300 ಅಡಿ ಎತ್ತರದ ಬ್ರಹ್ಮಗಿರಿಯ ನೆತ್ತಿಯ ಮೇಲೆ ಸಪ್ತಋಷಿಗಳು ಹೋಮ ಮಾಡಿದರೆಂದು ಹೇಳಲಾದ ಏಳು ಸಣ್ಣ ಗುಂಡಿಗಳಿವೆ. ತಲಕಾವೇರಿಯಲ್ಲಿ ಅಗಸ್ತ್ಯ ಋಷಿ ಪ್ರತಿóóಷ್ಠಿಸಿದ್ದೆಂದು ಹೇಳಲಾದ ಲಿಂಗ ಇರುವ ಅಗಸ್ತ್ಯೇಶ್ವರ ದೇವಾಲಯವೂ ಗಣಪತಿ ದೇವಾಲಯವೂ ಇವೆ. ಭಾಗಮಂಡಲ ತಲಕಾವೇರಿಯಿಂದ ವಾಹನದಾರಿಯಲ್ಲಿ 8 ಕಿ. ಮೀ. ದೂರದಲ್ಲಿದ್ದು ಹಾಗೂ ಕಾಲ್ದಾರಿಯಲ್ಲಿ ಕೇವಲ 5 ಕಿ. ಮೀ. ದೂರದಲ್ಲಿದೆ. ಹಿಂದಿನ ಕಾಲದಲ್ಲಿ ಇದನ್ನು ಭಗಂಡ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಈಗ ಶ್ರೀ ಭಗಂಡೇಶ್ವರ ದೇವಾಲಯವಿದೆ. ಶ್ರೀ ಭಗಂಡ ಮಹರ್ಷಿಗಳು ತಮ್ಮ ಶಿಷ್ಯರೊಂದಿಗೆ ಇಲ್ಲಿಯೇ ಆಶ್ರಮದಲ್ಲಿ ವಾಸವಾಗಿದ್ದರು. ಭಾಗಮಂಡಲದಿಂದ ತಲಕಾವೇರಿಗೆ ಹೋಗುವ 5.5 ಕಿಮೀ. ದೂರದ ಕಾಲುದಾರಿಯೊಂದುಂಟು. ಇದರ ನಡುವೆ ಭೀಮನಕಲ್ಲು ಎಂಬ ಒಂದು ಭಾರಿಬಂಡೆಯಿದೆ. ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದರೆಂದೂ ಭೀಮ ಊಟಮಾಡುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲನ್ನು ತೆಗೆದಿಟ್ಟನೆಂದೂ ಅದೇ ಭೀಮನಕಲ್ಲು ಎಂದೂ ಜನರಲ್ಲಿ ನಂಬಿಕೆಯಿದೆ. ಭೀಮನಕಲ್ಲಿನಿಂದ ಮುಂದುವರಿದರೆ ಸಿಗುವುದು ಸಲಾಮ್ ಕಲ್ಲು. ಟೀಪು ಸುಲ್ತಾನ (ನೋಡಿ) ಕೊಡಗನ್ನು ವಶಪಡಿಸಿಕೊಂಡು ತಲಕಾವೇರಿಯ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲು ಸೈನ್ಯದೊಂದಿಗೆ ಈ ಕಲ್ಲಿನ ವರೆಗೆ ಬಂದನೆಂದೂ ಇಲ್ಲಿ ನಿಂತು ಕಾವೇರಿಗೆ ನಮಸ್ಕರಿಸಿ ಹಿಂದಿರುಗಿದನೆಂದೂ ಪ್ರತೀತಿಯುಂಟು. ಪರ್ವತ ಶ್ರೇಣಿಗಳು, ಎತ್ತರದ ಕಣಿವೆಗಳು, ಬತ್ತದ ಬಯಲು, ಕಾಫಿ-ಏಲಕ್ಕಿ ತೋಟಗಳು, ಹಸುರು ಕಾಡು-ಇವುಗಳ ನಡುವೆ ಇರುವ ತಲಕಾವೇರಿ ಒಂದು ರಮ್ಯವಾದ ತಾಣ.

ಪೌರಾಣಿಕ ಹಿನ್ನಲೆ ಇತಿಹಾಸ

ಶ್ರೀ ಕಾವೇರಿಯ ಸ್ಥಳ ಪುರಾಣ

ಪೂರ್ವಕಾಲದಲ್ಲಿ ಕವೇರನೆಂಬ ಬ್ರಾಹ್ಮಣೋತ್ತಮನು ಬ್ರಹ್ಮಗಿರಿಯಲ್ಲಿ ವಾಸಿಸಿಕೊಂಡಿದ್ದು ತನಗೆ ಸಂತತಿಯಾಗಬೇಕೆಂದು ಬಯಸಿ ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ವಿಪ್ರೋತ್ತಮನ ತಪಸ್ಸಿಗೆ ಒಲಿದು ಬ್ರಹ್ಮದೇವನು ಪ್ರತ್ಯಕ್ಷನಾಗಿ ‘ನೀನು ಪೂರ್ವಕಾಲದಲ್ಲಿ ಪುತ್ರಸಂತಾನ ಪ್ರಾಪ್ತಿಯಾಗಲು ಬೇಕಾದ ಧರ್ಮವನ್ನು ಮಾಡಿರುವುದಿಲ್ಲ ಹಾಗಾಗಿ ನಿನಗೆ ಲೋಪಾಮುದ್ರೆಯೆಂಬ ನಾಮಾಂಕಿತವನ್ನೊಳಗೊಂಡ ನನ್ನ ಮಾನಸಪುತ್ರಿಯನ್ನು ಮಗಳಾಗಿ ನೀಡುವೆನು’ ಎಂದು ಹೇಳಿ ಕುಮಾರಿಯನ್ನು ಪುತ್ರಿಯಾಗಿ ಸ್ವೀಕರಿಸುವಂತೆ ಆಜ್ಞೆ ನೀಡಿದನು. ಅನುಸಾರವಾಗಿ ಕವೇರನು ಲೋಪಾಮುದ್ರೆಯನ್ನು ಸಂತೋಷದಿಂದ ಸ್ವೀಕರಿಸಿ ಅನೇಕ ವಿಧದಲ್ಲಿ ದಿವ್ಯ ಕುಮಾರಿಯನ್ನು ಸ್ತುತಿಸಿ ಕೊಂಡಾಡಿದನು. ದೇವದಾನವರು ಕ್ಷೀರಸಮುದ್ರವನ್ನು ಮಥನ ಮಾಡಿದಾಗ ಉತ್ಪತ್ತಿಯಾದ ಅಮೃತವನ್ನು ಅಸುರರು ಅಪಹರಿಸಿದರು. ಅದನ್ನು ಕೈವಶ ಮಾಡಿಕೊಳ್ಳಲು ದೇವದೇವತೆಗಳ ಪರವಾಗಿ ವಿಷ್ಣು ಅಂಶದಿಂದ ಹುಟ್ಟಿದ ಮೋಹಿನಿಯಂತೆಯೇ ಲಕ್ಷ್ಮಿದೇವಿಯ ಅಂಶದಿಂದ ಹುಟ್ಟಿದವಳೇ ಶ್ರೀ ಲೋಪಾಮುದ್ರೆ. ನಂತರ ಅವಳನ್ನು ಶ್ರೀ ಹರಿಯು ಬ್ರಹ್ಮದೇವನಿಗೆ ಆಶೀರ್ವಾದಪೂರ್ವಕವಾಗಿ ನೀಡಿ ಮಾನಸಪುತ್ರಿಯಾಗಿ ಸ್ವೀಕರಿಸೆಂದನು. ಹೀಗೆ ದಿವ್ಯಾಂಶ ಸಂಭೂತಳಾದ ಶ್ರೀ ಲೋಪಾಮುದ್ರೆಯ ದಿವ್ಯ ತೇಜಸ್ಸು-ಯೋಗ್ಯತೆಗಳನ್ನು ಕಂಡು ತಪೋಘನನಾದ ಕವೇರನು ಆಕೆಯನ್ನು ಪುನಃಪುನಃ ಸ್ತುತಿಸಿದನು. ಜಗತ್ತಿನ ಸಮಸ್ತ ಪ್ರಾಣಿಗಳಿಗೂ ಕಲ್ಯಾಣಾನುಗ್ರಹದೇವತೆಯಾದ ಶ್ರೀದೇವಿಯೇ ಆಗಿದ್ದ ಶ್ರೀ ಲೋಪಾಮುದ್ರಾ ದೇವಿಯು ಕವೇರ ಮುನಿಯನ್ನು ಸಂತೈಸುತ್ತಾ ‘ತಂದೆಯೇ! ನಾನು ಲೋಕ ಕಲ್ಯಾಣವನ್ನು ಸಾಧಿಸಲು ನದಿರೂಪವಾಗಿ ಹರಿದು ಸಮುದ್ರವನ್ನು ಸೇರುವೆನು. ಜನರು ನನ್ನನ್ನು ಲೋಕದಲ್ಲಿ ಬ್ರಹ್ಮಪುತ್ರಿಯೆಂದೂ, ಮಾಯೆ ಎಂದೂ, ಕಾವೇರಿ ಎಂದೂ ಕರೆಯುವರು. ಜನರ ಪಾಪಗಳನ್ನು ನಾನು ನಾಶ ಮಾಡುವವಳೆಂದು ಲೋಕಪ್ರಸಿದ್ಧಳಾಗುವೆನು ಎಂದು ಹೇಳಿದಳು. ನಂತರ ಕವೇರ ಮುನಿಯು ಲೋಪಾಮುದ್ರೆಯ ಅನುಗ್ರಹಕ್ಕೆ ಪಾತ್ರನಾಗಿ ದೇಹತ್ಯಾಗ ಮಾಡಿ ತನ್ನ ಸತಿಸಹಿತನಾಗಿ ಬ್ರಹ್ಮಲೋಕವನ್ನು ಸೇರಿದನು. ಇಳೆಗೆ ಇಳಿದು ಬಂದ ದೇವಕುವರಿ ಶ್ರೀ ಲೋಪಾಮುದ್ರೆಯು ಜಗತ್ಕಲ್ಯಾಣವನ್ನು ಸಾಧಿಸುವ ದೃಷ್ಟಿಯಿಂದ ಶಿವನನ್ನು ಕುರಿತು ಕಠೋರ ತಪಸ್ಸನ್ನು ಆಚರಿಸುತ್ತಾ, ಬ್ರಹ್ಮರ್ಷಿಗಳ ಒಡನೆ ಬ್ರಹ್ಮಗಿರಿಯ ಪವಿತ್ರ ನೆಲೆಯಲ್ಲಿ ವಾಸಿಸುತ್ತಾ ಇದ್ದಳು.

ದಿವ್ಯವಾದ ಕಾಂತಿಯಿಂದಲೂ, ತಪಸ್ಸಿನ ತೇಜಸ್ಸಿನಿಂದಲೂ ಕೂಡಿ ಕಾವೇರಿಯು ಬ್ರಹ್ಮಗಿರಿಯ ತಪ್ಪಲಿನಲ್ಲಿ ಬ್ರಹ್ಮರ್ಷಿಗಳ ಪವಿತ್ರವಾದ ಆಶ್ರಮದಲ್ಲಿ ಆನಂದವಾಗಿ ಬಾಳುತ್ತಿದ್ದಳು. ಆ ಸಂದರ್ಭದಲ್ಲಿ ಋಷಿವರ್ಯರಾದ ಅಗಸ್ತ್ಯಮುನಿಗಳು ಉತ್ತರ ಭಾರತದಿಂದ ದಕ್ಷಿಣಾಪಥಕ್ಕೆ ಬಂದವರು ಬ್ರಹ್ಮಗಿರಿಗೆ ಸಂದರ್ಶನವಿತ್ತರು. ಬ್ರಹ್ಮಋಷಿಗಳನೇಕರ ತಪೋಧಾಮವಾದ ಬ್ರಹ್ಮಗಿರಿಯಲ್ಲಿದ್ದ ವಸಿಷ್ಠ ಇತ್ಯಾದಿ ಮಹರ್ಷಿಗಳನ್ನು ಭೇಟಿಮಾಡಿ ಅವರಿಂದ ಆತಿಥ್ಯವನ್ನು ಪಡೆದು ಋಷ್ಯಾಶ್ರಮದ ಮೂಲ ಶಕ್ತಿಯೋ ಎಂಬಂತಿದ್ದ ಶ್ರೀ ಕಾವೇರಿ ದೇವಿಯನ್ನು ಕಂಡು ಹರ್ಷಗೊಂಡರು. ತ್ರಿಕಾಲ ಜ್ಞಾನಿಯೂ, ಮುನಿಪುಂಗವರೂ ಆದ ಅಗಸ್ತ್ಯ ಮಹರ್ಷಿಗಳು ಕಾವೇರಿ ದೇವಿಯ ಜನ್ಮದ ಮೂಲ ಉದ್ದೇಶವನ್ನು ಗ್ರಹಿಸಿಕೊಂಡರು. ಅಗಸ್ತ್ಯ ಋಷಿಗಳು ಶ್ರೀ ಕಾವೇರಿಯನ್ನು ವಿವಾಹವಾಗಲು ಬಯಸಿದರು. ಮಹರ್ಷಿಗಳ ಬಯಕೆಗೆ ಕಾವೇರಿದೇವಿಯು ಒಪ್ಪಿ ‘ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದೆಂದೂ, ಹೋದರೆ ತಾನು ಸಲಿಲೇಶ್ವರನಾದ ಸಮುದ್ರದೆಡೆಗೆ ನದಿಯಾಗಿ ಹೊರಟು ಹೋಗುತ್ತೇನೆ’ ಎಂತಲೂ ಹೇಳಿದಳು. ಶ್ರೀದೇವಿಯು ಹೇಳಿದ ನಿಬಂಧನೆಗೆ ಋಷಿ ಅಗಸ್ತ್ಯರು ಸಮ್ಮತಿಸಿದರು. ಅನುಸಾರವಾಗಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ದೇವದೇವತೆಗಳ ಸಮ್ಮುಖದಲ್ಲಿ ಶ್ರೀಅಗಸ್ತ್ಯ ಕಾವೇರಿಯರ ಕಲ್ಯಾಣವು ವೇದೋಕ್ತ ರೀತಿಯಲ್ಲಿ ಬಹಳ ವೈಭವದಿಂದ ನಡೆಯಿತು. ನಂತರ ಕೆಲವು ಸಮಯದ ತನಕ ನೂತನ ದಂಪತಿಗಳು ಗೃಹಸ್ತಾಶ್ರಮ ಜೀವನವನ್ನು ಸುಖವಾಗಿ ಸಾಗಿಸುತ್ತಾ ಬಂದರು. ಹೀಗಿರುವಾಗ ಒಂದು ದಿನ ಬ್ರಾಹ್ಮೀಮುಹೂರ್ತದಲ್ಲಿ ಮಹರ್ಷಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನಕಾ ನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ತೆರಳುವ ಮುನ್ನ ತಮ್ಮ ಪವಿತ್ರ ಕಮಂಡಲದೊಳಗೆ ಶ್ರೀ ಕಾವೇರಿಯನ್ನು ಆವಾಹನೆ ಮಾಡಿ ತಮ್ಮ ಶಿಷ್ಯರಿಗೆಲ್ಲಾ ‘ಜಾಗ್ರತೆ ನೋಡಿಕೊಳ್ಳಿ’ ಎಂದು ಹೇಳಿ ತೆರಳಿದರು. ಲೋಕಪಾವನೆಯಾಗಿ, ಲೋಕೇಶ್ವರಿಯಾಗಿ, ಲೋಕೋಪಯೋಗಿ ನದಿಯಾಗಿ ಬೆಳಗಬೇಕಾಗಿ ಇಳೆಗೆ ಇಳಿದು ಬಂದ ಮಹಾತಾಯಿ ಕಾವೇರಿ ಇದೇ ಸಂದರ್ಭವನ್ನು ನಿರೀಕ್ಷಿಸುತ್ತಿರಬೇಕು! ತನ್ನ ನಿಬಂಧನೆಯನ್ನು ಪತಿಯಾದ ಅಗಸ್ತ್ಯರು ಉಲ್ಲಂಘಿಸಿದರೆಂದು ಹೇಳಿ ಹೊರಡುವ ಅವಕಾಶ ಒದಗಿ ಬಂತು. ಕಾವೇರಿ ಕೂಡಲೇ ಕಮಂಡಲುವಿನಿಂದ ಹೊರಬಂದು ಪಕ್ಕದ ಬ್ರಹ್ಮಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಳಾಗಿ, ನದಿಯಾಗಿ ಹರಿಯ ಹೊರಟಳು. ಅವಳ ಹರಿವಿಕೆಯನ್ನು ತಡೆಯ ಹೋದ ಶಿಷ್ಯರಿಗೆ ಕಾಣಿಸಿಕೊಳ್ಳದೆ ಗುಪ್ತಗಾಮಿನಿಯಾಗಿ ಸ್ವಲ್ಪದೂರ ಹರಿದು ಮತ್ತೆ ಕಾಣಿಸಿಕೊಂಡಳು. ಆಗ ಸ್ನಾನಾಹ್ನಿಕಗಳನ್ನು ಮುಗಿಸಿ ಬಂದ ಮುನಿ ಪುಂಗವರಿಗೆ ತನ್ನ ಸತಿ ಎಸಗಿದ ಕಾರ್ಯದ ಅರಿವಾಗಿ “ನದಿಯಾಗಿ ಮುಂದೆ ಹರಿಯುವುದು ಬೇಡ. ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳು’ ಎಂದು ಅವರು ಬಹು ವಿಧದಲ್ಲಿ ಶ್ರೀಕಾವೇರಿಯನ್ನು ಕೇಳಿಕೊಂಡರು. ಓಂಕಾರೇಶ್ವರಿಯೂ, ಜಗನ್ಮಾತೆಯೂ, ಇಚ್ಛಾಜ್ಞಾನಕ್ರಿಯಾಶಕ್ತಿಸ್ವರೂಪಿನಣಿಯಾದ ಶ್ರೀ ಕಾವೇರಿ ದೇವಿಯು ಓಂಕಾರೇಶ್ವರರಾದ ಅಗಸ್ತ್ಯ ಮುನಿಗಳಿಗೆ ಸಮಾಧಾನ ಹೇಳುತ್ತಾ, ಲೋಕಕಲ್ಯಾಣಕ್ಕಾಗಿ ತಾನು ನದಿರೂಪ ತಳೆದು ಲೋಕೋಪಕಾರ ಮಾಡುವೆನೆಂದು ಸ್ಪಷ್ಟಪಡಿಸಿದಳು. ಅಗಸ್ತ್ಯರು ಶಿಷ್ಯವರ್ಗದವರನ್ನೊಡಗೂಡಿಕೊಂಡು ಶ್ರೀ ಕಾವೇರಿಯು ನದಿಯಾಗಿ ಹರಿದು ಮುಂದುವರಿದಂತೆ ಹಿಂಬಾಲಿಸುತ್ತಾ ತೆರಳಿದರು. ಕಾವೇರಿಯು ನದಿಯಾಗಿ ಹರಿದು ಕೆಲವು ಮೈಲುಗಳಷ್ಟು ಮುಂದೆ ತೆರಳಿದಾಗ ನಾಗಲೋಕದವರು ಹಾದಿಗೆ ಅಡ್ಡಲಾಗಿ ಬಂದು ಶ್ರೀಮಾತೆಯನ್ನು ಸ್ತುತಿಸಿ ಮಾತೆಯನ್ನು ನದಿಯಾಗಿ ಹರಿಯದೆ ಉಳಿಯಬೇಕೆಂದು ಪ್ರಾರ್ಥಿಸಿದರು. ಅವರನ್ನು ಸಮಾಧಾನಗೊಳಿಸಿ ಶ್ರೀಕಾವೇರಿಯು ಮುಂದೆ ಸರಿದಳು. ನಾಗಲೋಕದವರು ಶ್ರೀಮಾತೆಯನ್ನು ತಡೆದ ಸ್ಥಳವು ನಾಗತೀರ್ಥವೆಂದು ಪ್ರಸಿದ್ಧವಾಯಿತು. ನಾಗತೀರ್ಥದಿಂದ ಮುಂದೆ ಸಾಗಿದ ಶ್ರ್ರೀಕಾವೇರಿಯು ಭಾಗಮಂಡಲ ಕ್ಷೇತ್ರದಲ್ಲಿ ಕನಕ, ಸುಜ್ಯೋತಿ ನದಿಗಳನ್ನು ಒಡಗೂಡಿಕೊಂಡು ಮುಂದೆ ತೆರಳಿದರು. ಹೀಗೆ ಕೆಲವು ಮೈಲುಗಳು ಸಾಗಿದಾಗ ವಲಂಬುರಿ (ಬಲಮುರಿ) ಎಂಬ ಊರಿಗೆ ತಲುಪಿದಳು. ಅಲ್ಲಿ ಕೊಡಗನ್ನು ಆಳುತ್ತಿದ್ದ ಚಂದ್ರವರ್ಮ ರಾಜನ ಸಂತತಿಯವರೂ, ಮಾತೆಯ ಭಕ್ತರಾದವರೆಲ್ಲರೂ ಶ್ರೀಮಾತೆಯನ್ನು ಎದುರುಗೊಂಡರು. ಶ್ರೀಕಾವೇರಿ ನದಿಯ ನೀರಿನ ಹರಿಯುವಿಕೆಯ ರಭಸಕ್ಕೆ ಅಲ್ಲಿ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಯು ಹಿಂಬದಿಗೆ ಸರಿದು ಹೋಯಿತು. ನೆರೆದಿದ್ದ ಜನಸಮೂಹ, ತನ್ನ ಪತಿದೇವ, ಭಕ್ತ ವರ್ಗದವರೆಲ್ಲರನ್ನೂ ಶ್ರೀಮಾತೆ ಕೆಲವು ಮಾತುಗಳನ್ನು ಹೇಳಿದಳು. ತನ್ನ ಪತಿಯನ್ನು ಉದ್ದೇಶಿಸಿ, ತಾನು ಲೋಕೋಪಕಾರಕ್ಕಾಗಿ ನದಿಯಾಗಿ ಹೊರಟು ಹೋಗುವೆನೆಂದೂ, ಆದರೆ ದ್ವಿರೂಪ ತಾಳಿ ಒಂದು ರೂಪದಲ್ಲಿ ಕಾವೇರಿಯಾಗಿ ನದಿಸ್ವರೂಪದಲ್ಲಿ ಲೋಕೋಪಕಾರ ಕೆಲಸಕ್ಕೆ ತೆರಳಿ ಸಮುದ್ರವನ್ನು ಸೇರುವೆನೆಂತಲೂ, ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ “ಸತ್ಯ, ಧರ್ಮ, ಪ್ರೇಮ, ಭಕ್ತಿ, ಶ್ರದ್ಧೆಗಳಿಂದ ಕೂಡಿದವರಾಗಿ ಸದಾ ಸುಖಿಯಾಗಿರಿ. ಈ ದಿನ ಇಲ್ಲಿ ಹಿಂದೆ ಸರಿದುಹೋದ ಸ್ತ್ರೀಯರ ಸೀರೆ ನೆರಿಗೆಗಳು ನಾನು ನದಿರೂಪ ತಳೆದು ಹರಿದುದರ ಜ್ಞಾಪಕಾರ್ಥವಾಗಿ ಮುಂದೆಯೂ ಹೀಗೆಯೇ ನಿತ್ಯಾಚರಣೆಯಲ್ಲಿ ನೆರಿಗೆ ಕ್ರಮದಿಂದ ಸ್ತ್ರೀಯರಿಂದ ಅನುಸರಿಸಲ್ಪಡುವಂತಾಗಲಿ. ವರ್ಷಕ್ಕೊಮ್ಮೆ ಸೂರ್ಯನು ತುಲಾರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣ ಕಾಲದಲ್ಲಿ ಗಂಗಾದಿ ಸಮಸ್ತ ಪುಣ್ಯ ತೀರ್ಥಗಳಿಂದ ನಾನು ಒಡಗೂಡುವವಳಾಗುತ್ತೇನೆ” ಎಂದು ಹೇಳಿ ಆಶೀರ್ವದಿಸಿ ಮುಂದೆ ನದಿರೂಪವಾಗಿ ತೆರಳಿದಳು. ನೆರೆದಿದ್ದ ಜನಸ್ತೋಮ ಜಯಕಾವೇರಿ – ಜಯ ಜಗನ್ಮಾತೆ ಎನ್ನುತ್ತಾ ಒಕ್ಕೊರಲಿನಿಂದ ಶ್ರೀಮಾತೆಯನ್ನು ಕೊಂಡಾಡಿದರು. ಮಹರ್ಷಿಗಳಾದ ಶ್ರೀ ಅಗಸ್ತ್ಯರು ಶ್ರೀ ಕಾವೇರಿಯನ್ನು ಆಶೀರ್ವದಿಸಿ ಅವಳ ಮೂಲಕ ಲೋಕಕ್ಕೆ ಕಲ್ಯಾಣ ಉಂಟಾಗಲಿ ಎಂದು ಹಾರೈಸಿದರು. ಬಲಮುರಿಯಿಂದ ಮುಂದೆ ಗುಹ್ಯ-ರಾಮಸ್ವಾಮಿ ಕಣಿವೆ-ಕನ್ನಂಬಾಡಿಗಳನ್ನು ಹಾದು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣದ ಹತ್ತಿರ ಹರಿದು ಪುನಃ ಪೂರ್ವಾಭಿಮುಖಿಯಾಗಿ ಸಾಗಿ ಶ್ರೀರಂಗಪಟ್ಟಣವನ್ನು ಸೇರಿದಳು. ಮುಂದಕ್ಕೆ ಸಾಗಿ ತಿರುಮಕೂಡಲು-ತಲಕಾಡು-ಮೆಟ್ಟೂರು-ಶ್ರೀರಂಗಂ-ತಿರುಚಿನಾಪಳ್ಳಿ-ಕುಂಭಕೋಣಂ ಇತ್ಯಾದಿ ಊರುಗಳನ್ನು ಸೇರುತ್ತಾ ಕೊನೆಗೆ ಪೂರ್ವ ಸಮುದ್ರವನ್ನು ಸೇರಿದಳು.

ಕಾವೇರಿ ನದಿಗೆ ಅಲ್ಲಲ್ಲಿ ಹರಿದು ಸೇರಿದ ಅನೇಕ ಉಪನದಿಗಳ ಪೈಕಿ ಕನ್ನಿಕೆ ಮತ್ತು ಸುಜ್ಯೋತಿ ಎಂಬ ಎರಡು ನದಿಗಳು ಪ್ರಸಿದ್ಧವಾಗಿದ್ದವು. ಅವುಗಳಿಗೆ ತಮ್ಮದೇ ಆದ ಪೌರಾಣಿಕ ಹಿನ್ನಲೆಯಿದೆ. ಸುಜ್ಯೋತಿಯು ಕನಕೆಯಂತೆ ಕಾವೇರಿಯನ್ನು ನದಿರೂಪಳಾಗಿ ಹರಿದು ಸೇರಿ ಸಂಗಮವಾಗುವುದನ್ನು ಭೌತಿಕ ಚಕ್ಷುಗಳಿಂದ ಕಾಣಲು ಸಾಧ್ಯವಿಲ್ಲ. ಗಂಗಾ, ಯಮುನಾ ಹಾಗೂ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಸರಸ್ವತಿ ನದಿ ಹೇಗೆ ಅಜ್ಞಾತವಾಗಿ ಸಂಗಮವಾಗಿದೆಯೋ ಹಾಗೆಯೇ ಕನ್ನಿಕೆ-ಕಾವೇರಿ ನದಿಗಳ ಒಡನೆ ಸುಜ್ಯೋತಿಯು ಸಂಗಮವಾಗಿರುತ್ತದೆ.

ಕನ್ನಿಕೆಯು ಪೌರಾಣಿಕವಾಗಿ ಇಂದ್ರನ ಪರಿಚಾರಿಕೆಯಾದ ಯಕ್ಷಸ್ತ್ರೀಯಾಗಿದ್ದಳು. ಹಿಂದೆ ಸುಯಜ್ಞೆಯೆಂಬ ವಿಪ್ರಶ್ರೇಷ್ಠನೊಬ್ಬನಿದ್ದು ಅವನು ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸನ್ನು ಆಚರಿಸಿದನು. ಭಕ್ತನ ತಪಸ್ಸಿಗೆ ಒಲಿದ ಭಗವಾನ್ ಶ್ರೀಹರಿಯು ತಾಪಸೋತ್ತಮನಾದ ಸುಯಜ್ಞನಿಗೆ ತನ್ನಂಶದಿಂದ ಉತ್ಪನ್ನಳಾದ ಕನ್ನಿಕೆ ಸುಜ್ಯೋತಿ ಎಂಬುವಳನ್ನು ನೀಡಿ, ಬ್ರಹ್ಮಗಿರಿಯ ಬಳಿಯ ಗಜರಾಜನಿಗೆ ತೆರಳಿ ಅಲ್ಲಿ ಪುತ್ರಿಯೊಡನೆ ಇರು ಎಂದು ಹೇಳಿ ಅಂತರ್ಧಾನನಾದನು. ಸುಯಜ್ಞನು ವರಲಬ್ಧೆಯಾದ ಕುವರಿ ಸುಜ್ಯೋತಿಯೊಡನೆ ಗಜರಾಜಗಿರಿಗೆ ಬಂದನು. ಅಲ್ಲಿದ್ದ ಶುಭಕಾರಿಣಿ ಯಕ್ಷಿಣಿಯಾದ ಕನ್ನಿಕೆಯೊಡನೆ ಪುತ್ರಿ ಸುಜ್ಯೋತಿಯನ್ನು ಕೂಡಿಕೊಂಡು ಶುದ್ಧಚಾರಿತ್ರ್ಯವಂತನೂ, ತಪೋನಿಷ್ಠನೂ ಆಗಿ ಬಾಳಹೊರಟನು. ಕೆಲವು ಕಾಲಾನಂತರ ಶ್ರೀಮಹಾವಿಷ್ಣುವಿನ ದರ್ಶನ ಹೊಂದಿ ವೈಕುಂಠಧಾಮಕ್ಕೆ ತೆರಳಿದನು. ತಂದೆಯ ನಿರ್ಗಮನದ ನಂತರ ಪುತ್ರಿ ಸುಜ್ಯೋತಿಯು ಭಗವಂತನ ದರ್ಶನಕ್ಕಾಗಿ ವಿಶೇಷವಾದ ತಪಸ್ಸನ್ನೆಸಗಿದಳು. ಅಷ್ಟರಲ್ಲಿ ದೇವಲೋಕದ ಒಡೆಯನಾದ ದೇವೇಂದ್ರನು ಅಲ್ಲಿಗೆ ಆಗಮಿಸಿ ಸುಜ್ಯೋತಿಯನ್ನು ವಿವಾಹವಾಗಲು ಬಯಸಿದನು. ಅವನು ಸುಜ್ಯೋತಿಯನ್ನು ಕುರಿತು “ಸಹಸ್ರ ಸಂವತ್ಸರಗಳ ನಂತರ ನದಿಯಾಗಿ ತೆರಳು. ಆ ತನಕ ನನ್ನೊಡನೆ ಪತ್ನಿಯಾಗಿ ಬಾಳಿಕೊಂಡಿರು” ಎಂಬುದಾಗಿ ಹೇಳಿದನು. ಇಂದ್ರನ ಈ ಬಯಕೆಯಿಂದ ಅಸಂತುಷ್ಟನಾದ ಸುಜ್ಯೋತಿಯು ಗೆಳತಿ ಕನ್ನಿಕೆಯೊಡನೆ ಮಾತನಾಡಿ ಆಕೆಯನ್ನು ಒಡಗೂಡಿಕೊಂಡು ನದಿರೂಪಳಾಗಿ ಹರಿಯ ಹೊರಟಳು. ತನ್ನ ಮಾತನ್ನು ಲೆಕ್ಕಿಸದೆ ನದಿಯಾಗಿ ಸರಿದ ಸುಜ್ಯೋತಿಯನ್ನು ಕಂಡು ಇಂದ್ರನು ‘ಜಲಶೂನ್ಯಳಾಗು’ ಎಂದು ಆಕೆಗೆ ಶಾಪವನ್ನು ಕೊಟ್ಟನು. ಸುಜ್ಯೋತಿಯು ಇಂದ್ರನಲ್ಲಿ ಮರುಸಮಾಧಾನದ ವರಬೇಡಲು ಇಂದ್ರನು ಪರಮಪಾವನೆಯಾದ ಕಾವೇರಿ ನದಿಯ ಪವಿತ್ರವಾರಿ ಸೋಂಕಿದಾಗ ಜಲಪೂರ್ಣಳಾಗೆಂದು ಮರುವರವನ್ನಿತ್ತನು. ಅನುಸಾರವಾಗಿ ಸುಜ್ಯೋತಿಯು ಕನ್ನಿಕಾ-ಕಾವೇರಿ ಸಂಗಮದ ಪವಿತ್ರ ಮುಹೂರ್ತವನ್ನು ನಿರೀಕ್ಷಿಸುತ್ತಾ ಇದ್ದಳು. ಮಂಗಳ ಮುಹೂರ್ತದಲ್ಲಿ ಪವಿತ್ರ ಕಾವೇರಿ-ಕನ್ನಿಕೆಯರ ಸಂಗಮವಾದಾಗ ಸುಜ್ಯೋತಿಯು ಸೇರಿ ಜಲ ಶೂನ್ಯತೆಯನ್ನು ಕಳೆದುಕೊಂಡು ಜಲಪೂರ್ಣತೆಯನ್ನು ಪಡೆದು ಪವಿತ್ರ ನದಿಯಾಗಿ ರೂಪಾಂತರ ಹೊಂದಿದಳು ಎಂದು ಸ್ಕಂದ ಪುರಾಣವು ತಿಳಿಸುತ್ತದೆ.

ಭಾಗಮಂಡಲದ ಕುರಿತಾದ ಪುರಾಣಕಥೆ

ಭಾಗಮಂಡಲ ಕ್ಷೇತ್ರಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿರುತ್ತದೆ. ಇಲ್ಲಿ ಶ್ರೀ ಭಗಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಮಹಾವಿಷ್ಣು ದೇಗುಲಗಳಿವೆ. ಶ್ರೀ ಮಹಾಗಣಪತಿ ಸನ್ನಿಧಿಯು ದೇಗುಲದ ಹೊರ ಅಂಗಣದಲ್ಲಿದೆ.

ಹಿಂದೆ ಭಗಂಡರೆಂಬ ಮುನಿವರ್ಯರು ಇಲ್ಲಿ ವಾಸವಾಗಿದ್ದು, ಷಣ್ಮುಖಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸುಬ್ರಹ್ಮಣ್ಯಸ್ವಾಮಿಯ ದಿವ್ಯ ನೆಲೆಯಾಗಿದ್ದು ಸ್ಕಂದಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದ್ದ ಇಂದಿನ ಭಾಗಮಂಡಲದ ಭೂ ಭಾಗವನ್ನು ಭಗಂಡ ಋಷಿಗಳ ಮೇಲೆ ಸುಪ್ರೀತರಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಅನುಗ್ರಹ ಪೂರ್ವಕವಾಗಿ ಅವರಿಗೆ ಕೊಡುಗೆಯಾಗಿ ನೀಡುತ್ತಾರೆ. ಋಷಿಗಳ ಪರಮಪಾವನನಾದ ತಪೋಭೂಮಿ ಹಾಗೂ ದೇವನೆಲೆಯಾದ ಸ್ಕಂದ ಕ್ಷೇತ್ರದಲ್ಲಿ ಸರ್ವಜೀವರ ಕ್ಷೇಮಕ್ಕಾಗಿ ಶಿವಲಿಂಗವೊಂದನ್ನು ಭಗಂಡ ಮಹರ್ಷಿಗಳು ಪ್ರತಿಷ್ಠಾಪಿಸುತ್ತಾರೆ. ಭಗಂಡ ಋಷಿಯು ನೆಲೆಸಿ ತಪಸ್ಸನ್ನು ಎಸಗಿ ಷಣ್ಮುಖಸ್ವಾಮಿಯಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರ ಎಂದು ಹೆಸರಾಯಿತು. ಅದೇ ಹೆಸರು ಮುಂದೆ ಭಾಗಮಂಡಲ ಎಂದು ರೂಪಾಂತರವನ್ನು ಹೊಂದಿತು. ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಭಗಂಡೇಶ್ವರನೆಂದು ಸ್ತುತಿಸಿ ಶಿವನನ್ನೇ ಪ್ರಧಾನವಾಗಿ ಪೂಜಿಸುವಂತಾಯಿತು. ಮಹಾ ತಪಸ್ವಿಗಳಾದ ಭಗಂಡ ಮಹರ್ಷಿಗಳು ತಪಸ್ಸನ್ನು ಎಸಗಿದ ಭೂಮಿಯಾದುದರ ಜೊತೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಯು ಸ್ವಕೀಯ ಕ್ಷೇತ್ರವಾಗಿಸಿಕೊಂಡಿದ್ದ ಭೂಭಾಗವಾಗಿದ್ದು, ಋಷಿ ಪ್ರತಿಷ್ಠೆಯಿಂದಾದ ಶಿವದೇಗುಲದಿಂದ ಕೂಡಿರುವ ಭಾಗಮಂಡಲವು ಪುರಾಣ ಪ್ರಸಿದ್ಧವಾದ ಪವಿತ್ರ ಕ್ಷೇತ್ರ ಎಂಬುದರಲ್ಲಿ ಸಂದೇಹವಿಲ್ಲ. ಪರಮಪಾವನೆಯಾದ ಕಾವೇರಿ ನದಿಯು ಭಾಗಮಂಡಲಕ್ಕೆ ಹರಿದು ಬಂದಾಗ ಕನ್ನಿಕಾ-ಸುಜ್ಯೋತಿಯರು ಸೇರಿ ತ್ರಿವೇಣಿ ಸಂಗಮವಾದ್ದರಿಂದ ಭಾಗಮಂಡಲವು ಇಮ್ಮಡಿ ಪವಿತ್ರವಾದ ತೀರ್ಥಕ್ಷೇತ್ರವಾಗಿರುತ್ತದೆ. ಇಲ್ಲಿ ಮಂತ್ರಸಿದ್ಧಿ, ತಪಸ್ಸಿದ್ಧಿ, ಅಧ್ಯಾತ್ಮ ಸಾಕ್ಷಾತ್ಕಾರ ಇವುಗಳೆಲ್ಲ ಕ್ರಮವಾಗಿ ಸಾಧಕನಿಗೆ ಬಹಳ ಬೇಗ ಲಭಿಸುತ್ತದೆ ಎಂಬುದಾಗಿ ಸ್ಥಳಪುರಾಣದಿಂದ ತಿಳಿದುಬರುತ್ತದೆ. ಈ ವಿಚಾರವಾಗಿ ಅನೇಕ ಮಂದಿ ಸಾಧು ಸಂತರ ಹಾಗೂ ಸಾಧಕರ ಅನುಭವವು ಈ ಪುರಾಣೋಕ್ತಿಗಳನ್ನು ದೃಢೀಕರಿಸುತ್ತದೆ.

ಭಾಗಮಂಡಲದಲ್ಲಿರುವ ದೇಗುಲಗಳನ್ನು ತಪೋವರ್ಯರಾದ ಶ್ರೀ ಭಗಂಡ ಋಷಿಗಳೇ ಸಂಸ್ಥಾಪಿಸಿ ಇಲ್ಲಿ ಭಗವಂತನ ವಿವಿಧ ರೂಪಶಕ್ತಿಗಳನ್ನು ಆವಾಹಿಸಿ ಪ್ರತಿಷ್ಠಿಸಿದರು. ಋಷಿಯಾಶ್ರಮದಂತಿದ್ದ ಈ ದೇವಾಲಯಗಳು ಕಾಲಕ್ರಮೇಣ ನಾಯಕರು, ಆಳರಸರ ಕಾಲದಲ್ಲಿ ಕಟ್ಟಡದ ಮಟ್ಟಿಗೆ ಯುಕ್ತವಾದ ಸುಧಾರಣೆಯನ್ನು ಪಡೆದವು. ಕೊನೆಗೆ ಕೊಡಗನ್ನು ಆಳಿದ ಶ್ರೀಮತ್ ದೊಡ್ಡವೀರರಾಜೇಂದ್ರ ಒಡೆಯರ ಕಾಲದಲ್ಲಿ ಮತ್ತಷ್ಟು ಅಂದವಾದ ಶಿಲ್ಪಕಲಾಪೂರ್ಣವಾದ ದೇವಸ್ಥಾನ ಕಟ್ಟೋಣವು ನೆರವೇರಿತು. ಅನುಸಾರವಾಗಿ ದೇಗುಲದ ಬ್ರಹ್ಮಕಳಶ ಸಂಪ್ರೋಕ್ಷಣೆಗಳು ಕಲಿವರ್ಷ 4878ನೇ ನಳ ಸಂವತ್ಸರದ ಮಾಘಶುದ್ದ 5ರ ಭಾನುವಾರ ಘಳಿಗೆ 5ಕ್ಕೆ ನಡೆಸಲ್ಪಟ್ಟವು. (ಕ್ರಿ. ಶ. 1790ರಲ್ಲಿ)

source: http://rcmysore-portal.kar.nic.in/temples/bhagandeshwaratemple/kan-about.html

ವ್ಯವಸ್ಥಾಪನ ಸಮಿತಿ

ದೇವಸ್ಥಾನದ ಅಧಿಕಾರಿಗಳು, ವಿಳಾಸ ಮತ್ತು ದೂರವಾಣಿ ಸಂಖ್ಯೆ
ಕಾರ್ಯನಿರ್ವಹಣಾಧಿಕಾರಿಗಳು,
ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯ,
ಭಾಗಮಂಡಲ, ಮಡಿಕೇರಿ ತಾಲ್ಲೂಕು,
ಕೊಡಗು ಜಿಲ್ಲೆ – 571247.
ದೂರವಾಣಿ ಸಂಖ್ಯೆ: 08272 – 243272
ಇ-ಮೇಲ್ ವಿಳಾಸ : eo.bagandeshwaratkomtpl@gmail.com

ಪೂಜಾ ಸಮಯ

ಶ್ರೀ ಭಗಂಡೇಶ್ವರ ದೇವಾಲಯ

  • ಅಭಿಷೇಕ – ಬೆಳಿಗ್ಗೆ 6:30 ರಿಂದ 7:00
  • ರುದ್ರಾಭಿಷೇಕ – ಬೆಳಿಗ್ಗೆ 8:15 ರಿಂದ 9:30
  • ಮಹಾಮಂಗಳಾರತಿ – ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:30
  • ದೇವಸ್ಥಾನ ಮಧ್ಯಾಹ್ನ 1:30 ರಿಂದ 3:00 ರವರೆಗೆ ಮುಚ್ಚಿರುತ್ತದೆ
  • ಗಣಪತಿ ಪೂಜೆ – ಸಂಜೆ 7:15
  • ಮಹಾಮಂಗಳಾರತಿ – ಸಂಜೆ 7:30 ರಿಂದ 8:30
  • ಪ್ರತಿ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ
  • ಪ್ರತಿ ಚತುರ್ಥಿಯಂದು ಗಣಹೋಮ

ತಲಕಾವೇರಿ ದೇವಾಲಯ

  • ದೇವಸ್ಥಾನದ ಸಮಯ – ಬೆಳಿಗ್ಗೆ 6:00 ರಿಂದ ಸಂಜೆ 6:00
  • ಅಭಿಷೇಕ – ಬೆಳಿಗ್ಗೆ 7:00
  • ಮಹಾಮಂಗಳಾರತಿ – ಸಂಜೆ 5:45
  • ಸಾಯಂಕಾಲ 6.೦೦ ಗಂಟೆಯಿಂದ ಬೆಳಿಗ್ಗೆ 6.೦೦ ರವರೆಗೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ

ದೇವರಕಾಡು

ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿವೆ.
ಕೊಡಗು ಜಿಲ್ಲೆಯ 4104 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿಧ್ಯಮಯ ಸಸ್ಯಗಳು, ಗಿಡ – ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತವೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.

ಚಿತ್ರಶಾಲೆ

ಸಂದರ್ಶನ: ಕೊಡಗಿನ ಭಗಂಡೇಶ್ವರ ದೇವಾಲಯದಿಂದ ತುಲಾಸಂಕ್ರಮಣಕ್ಕೆ ತಲಕಾವೇರಿಗೆ ಚಿನ್ನಾಭರಣಗಳನ್ನು ಕೊಂಡೊಯ್ಯುವ ದೃಷ್ಯಾವಳಿಗಳು

Disclaimer: ಶ್ರೀ ತಲಕಾವೇರಿ – ಭಗಂಡೇಶ್ವರ ದೇವಾಲಯದ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರು, ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾಗಲೆಂದು ಇಲ್ಲಿ ನೀಡಲಾಗಿದೆ.
–    ಸಂಪಾದಕರು, ಸರ್ಚ್‍ಕೂರ್ಗ್ ಮಿಡಿಯಾ

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments