ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ:

ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ:

|| ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ||

ವೈಶಾಖ ಮಾಸದಲ್ಲಿ ಅಕ್ಷಯತೃತೀಯ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ಅವತಾರವು ನಾಲ್ಕನೆಯದು. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ತನಗೆ ಸಾವು ಬರಬಾರದೆಂದು ಹಿರಣ್ಯಕಶಿಪು ಬ್ರಹ್ಮನಿಂದ ವಿಶೇಷ ವರವನ್ನು ಪಡೆದುಕೊಂಡಿದ್ದ. ಅಲ್ಲದೆ ಯಾವುದೇ ಅಸ್ತ್ರಗಳಿಂದ ತನ್ನನ್ನು ಕೊಲ್ಲಬಾರದು, ಹಗಲು ಅಥವಾ ರಾತ್ರಿಯಲ್ಲಿ ತನಗೆ ಸಾವುಂಟಾಗಬಾರದು ಎಂದೂ ಅವನು ವರವನ್ನು ಪಡೆದಿದ್ದ. ಆದುದರಿಂದ ಭಗವಂತನು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಆವಿರ್ಭವಿಸಿ ತನ್ನ ಉಗುರುಗಳಿಂದ ಮುಸ್ಸಂಜೆ ಹೊತ್ತಿನಲ್ಲಿ ಹಿರಣ್ಯಕಶಿಪುವನ್ನು ಸಂಹರಿಸಿದ.
ಭೂಪಾಲಕನಾದ ಶ್ರೀವಿಷ್ಣು ತನ್ನ ಮಡದಿ ಶ್ರೀಲಕ್ಷ್ಮೀಯೊಂದಿಗೆ ಏಕಾಂತದಲ್ಲಿ ಇರುತ್ತಾನೆ. ಇದೇ ಸಂದರ್ಭ ಋಷಿಗಳ ಆಗಮನವಾಗುತ್ತದೆ. ಆಗ ದ್ವಾರಪಾಲಕರಾದ ಜಯ-ವಿಜಯರು ವೈಕುಂಠ ಪ್ರವೇಶಿಸಲು ಋಷಿಗಳನ್ನು ತಡೆಯುತ್ತಾರೆ. ಪರಿ ಪರಿಯಾಗಿ ಹೇಳಿ ಅವರಿಗೆ ವೈಕುಂಠ ಪತಿ ಶ್ರೀ ವಿಷ್ಣುವಿನ ದರ್ಶನ ಮಾಡದಂತೆ ತಡೆಯುತ್ತಾರೆ. ಇದರಿಂದ ಕುಪಿತಗೊಂಡ ಋಷಿಗಳು ಭೂಲೋಕದಲ್ಲಿ ಜನಿಸುವಂತೆ ಜಯ-ವಿಜಯರಿಗೆ ಶಾಪ ನೀಡುತ್ತಾರೆ. ಇದೇ ಸಂದರ್ಭ ಋಪಿಗಳು ತಮಗೆ ನೀಡಿದ ಶಾಪದ ಬಗ್ಗೆ ದ್ವಾರಪಾಲಕರಾದ ಜಯ-ವಿಜಯರು ವಿಷ್ಣುವಿಗೆ ತಿಳಿಸುತ್ತಾರೆ. ಶಾಪ ವಿಮೋಚನೆಗೆ ಬೇಡಿದಾಗ ವಿಷ್ಣುವು ನೀವು ನನ್ನ ಸ್ನೇಹಿತರಾಗಿ ಬಂದು ಏಳು ಜನ್ಮವನ್ನು ಪಡೆದು ಶಾಪ ವಿಮೋಚನೆ ಮಾಡುತ್ತಿರೋ ಅಥವಾ ಮೂರು ಜನ್ಮಗಳಲ್ಲಿ ತನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೋಳ್ಳುತ್ತೀರೋ? ಎಂದು ಕೇಳಿದಾಗ ಅವರು ನಾವು ನಿನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ ಎಂದರು. ಅದರ ಫಲವೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಿನ ಜನನ.

ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್‌ವಿಜೇತ. ಜನರು ಹೇಳುವ ದೇವರು ಎಂಬುದು ಇರುವದಾದರೇ ಅದು ನಾನೇ ಅಲ್ಲದೆ ಬೇರೆ ಯಾರು ಇಲ್ಲ ಎಂಬ ದುರಾಗ್ರಹಿ ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ ಹಿರಣ್ಯಕಶಿಪುವಿಗೆ ಬೇಕು ಪ್ರತ್ಯಕ್ಷ ಪ್ರತೀತಿ. ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಭದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು. ಎಲ್ಲೆಲ್ಲೂ ಇರುವವನು ಈ ಕಂಭದಲ್ಲಿ ಮಾತ್ರ ಏಕಿಲ್ಲ ಕಂಭದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಭದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ ಎಂದಾಗ ಹಿರಣ್ಯ ಕಶಿಪು ಕಂಭವನ್ನು ಝಾಡಿಸಿದಾಗ ಆ ಜಡ ಕಂಭದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.

ಈ ರೀತಿ ಇಡೀ ವಿಶ್ವವು ಹಿರಣ್ಯಕಷಪುವಿನ ದುರಾಡಳಿತದಿಂದ ಮುಕ್ತವಾಯಿತು. ಅಲೌಕಿಕ ಆನಂದದಿಂದ ಎಲ್ಲರೂ ಹರ್ಷಚಿತ್ತರಾದರು. ನಂತರ ದೇವತೆಗಳಿಲ್ಲ ಶ್ರೀ ಬ್ರಹ್ಮನ ನೇತೃತ್ವದಲ್ಲಿ ಶ್ರೀ ವಿಷ್ಣುವಿನ ಬಳಿಗೆ ಬಂದರು. ಅವರಲ್ಲಿ ಪಿತಾ, ಸಿದ್ದಾ, ವಿದ್ಯಾಧಾರ, ನಾಗಾ, ಮನು, ಪ್ರಜಾಪತಿ, ಗಂಧರ್ವ, ಯಕ್ಷ, ಕಿಂಪುರುಷ ಹಾಗೂ ಮಾನವ ರೂಪದ ಇತರರು ಇದ್ದರು. ಶ್ರೀ ನರಸಿಂಹನ ಸಮೀಪ ನಿಂತು ಪ್ರಾರ್ಥನೆ ಸಲ್ಲಿಸಿದರು. ಸಿಂಹಾಸನದ ಮೇಲೆ ಕುಳಿತ ನರಸಿಂಹನ ಆಧ್ಯಾತ್ಮಿಕ ತೇಜಸ್ಸು ಅದ್ಭುತವಾಗಿತ್ತು.
ಮುಗ್ಧ ಬಾಲಕನ ಪರಮ ಭಕ್ತಿಗೆ ಮೆಚ್ಚಿ ಕಂಬದಿಂದ ಉದಿಸಿ, ದುಷ್ಟ ಸಂಹಾರ ಮಾಡಿದ ನರಸಿಂಹನ ಜಯಂತಿ ಇಂದು. ಇವತ್ತು ನಮ್ಮ ಜಗತ್ತಿನಲ್ಲಿ ಧರ್ಮವನ್ನೊಡೆದು ಅಧರ್ಮದ ಮಾರ್ಗದಲ್ಲೇ ಸಾಗುವವರ ಸಂಹಾರಕ್ಕೂ ಅವನ ನಾಮದ ನೆನಕೆ ಬೇಕಾಗಿದೆ.

ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ನಾವು ಸೂಕ್ಷ್ಮವಾಗಿ ನಮ್ಮ ಬದುಕನ್ನು ಅಧ್ಯಯಿಸಿಕೊಂಡು ಮಗುವಿನ ನಿರ್ಮಲ ಮನಸ್ಸಿನಿಂದ ಎಲ್ಲವೂ ನಿನ್ನದೇ, ನನ್ನದೇನಿದೆ ಎಂಬಂತಹ ಪ್ರೀತಿಯಾದ ಭಕ್ತಿಯನ್ನು ಅಳವಡಿಸಿಕೊಳ್ಳತೊಡಗಿದಾಗ ನಮ್ಮ ಮಾನವತನ ಮತ್ತು ಸಿಂಹತನದ ಅಗಾಧ ಶಕ್ತಿ ರಾಜ ಗಾಂಭೀರ್ಯಗಳು ನಮ್ಮ ಬಲವಾಗಿ, ಅದೇ ದೈವಶಕ್ತಿಯಾಗಿ ರೂಪುಗೊಂಡು ನಮ್ಮಲ್ಲಿರುವ ಎಲ್ಲ ರಾಕ್ಷಸಪ್ರವೃತ್ತಿಗಳೂ ಅಸುನೀಗುತ್ತವೆ. ಹೀಗಾಗಿ ಪ್ರಹ್ಲಾದನ ಮುಗ್ಧ ಪ್ರೀತಿ, ನರಸಿಂಹ ಎಂಬ ದಿವ್ಯತೆ ಮತ್ತು ಹಿರಣ್ಯಾಕ್ಷ – ಹಿರಣ್ಯಕಶಿಪುಗಳೆಂಬ ಅವಗುಣಗಳ ನಾಶದ ಕತೆಯನ್ನು ನಮ್ಮ ಕತೆಯನ್ನಾಗಿಯೇ ಕಂಡುಕೊಂಡು ನಮ್ಮ ಬದುಕನ್ನು ಉತ್ತಮತೆಯ ಕಡೆಗೆ ನಡೆಸಿಕೊಳ್ಳುವ ಸಾಧ್ಯತೆ ಇದೆ.

ನರಸಿಂಹ ಸ್ವಾಮಿಯ ಪೂಜೆಯಿಂದ – ಸರ್ವರೋಗದಿಂದ ವಿಮುಕ್ತಿ, ಸಾಲಭಾದೆ ನಿವಾರಣೆ, ಸುಖ ಸಂಪತ್ತು ಸಂತಸ ಲಭ್ಯ, ದುಷ್ಟಶಕಕ್ತಿಗಳಿಂದ ಭಯ ನಿವಾರಣೆ ದೊರಕುವುದರಲ್ಲಿ ಸಂಶಯವೇಯಿಲ್ಲವೆಂದು ತಿಳಿಸುತ್ತದೆ ಪುರಾಣ ಪುಣ್ಯಕತೆಗಳು. ನರಸಿಂಹ ಜಯಂತಿ ಪ್ರಯುಕ್ತ ನರಸಿಂಹನ ಅನುಗ್ರಹ ನಿಮದಾಗಲಿ.

ಸರ್ವರಿಗೂ ನರಸಿಂಹ ಜಯಂತಿ ಶುಭಾಶಯಗಳು

|| ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ ಉಗ್ರಸಿಂಹೋ ಮಹಾದೇವಸ್ತಂಭೋಶ್ಚೋಗ್ರಲೋಚನಃ ರೌದ್ರಸರ್ವಾದ್ಭುತಃ ಶ್ರೀ ಮನ್ಸೋಗಾನಂದ ಸ್ತ್ರೀ ವಿಕ್ರಮಃ ಹರಿಃ ಕೋಲಾಹಲಶ್ಚಕ್ರೀ ವಿಜಯೋ ಜಯವರ್ಧನಃ…..ನಮೋನಾರಸಿಂಹಂ ||

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments