ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ

ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ

ಮಡಿಕೇರಿ: ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಸಂಪೂರ್ಣ ಉಚಿತ ಪ್ರವೇಶಾತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋಗಿದ್ದು, ಸ್ವಲ್ಪ ಚೇತರಿಕೆ ಕಂಡುಕೊಳ್ಳುವ ಸಂದರ್ಭ ಕೊರೋನಾ ಛಾಯೆ ನಮ್ಮ ದೇಶವನ್ನು ಆವರಿಸಿ ಲಾಕ್‌ಡೌನ್‌ನಲ್ಲಿ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ಜಿಲ್ಲೆಯ ಜನ ಕೂಡ ಕಠಿಣ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲಾ ಆಡಳಿತ ಮಂಡಳಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳನ್ನು ಉಚಿತವಾಗಿ ದಾಖಲಿಸಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಅಲ್ಲದೆ ಇತರ ವಿದ್ಯಾರ್ಥಿಗಳ ಪ್ರೇವೇಶಾತಿ ಶುಲ್ಕದಲ್ಲಿ ಶೇ.೫೦ ರಷ್ಟು ಕಡಿತವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಕ್ರೆಸೆಂಟ್ ಶಾಲಾ ಅಧ್ಯಾಪಕರುಗಳು ತಮ್ಮ ವೇತನದಲ್ಲಿ ಶೇ.೨೫ ರಷ್ಟು ಕಡಿತಗೊಳಿಸಿ ಸೇವೆ ಸಲ್ಲಿಸುವುದಾಗಿ ಸ್ವಯಂ ನಿರ್ಣಯ ಕೈಗೊಂಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ.

ಕೇಂದ್ರೀಯ ಮಾದರಿ ಪಠ್ಯಕ್ರಮವನ್ನು ಅನುಸರಿಸಿ ಶಿಕ್ಷಣ ರಂಗದಲ್ಲಿ ಉತ್ಕೃಷ್ಟ ಸೇವೆಯನ್ನು ಸಲ್ಲಿಸುತ್ತಾ, ಅನುಭವಿ ಅಧ್ಯಾಪಕರುಗಳ ಕಠಿಣ ಪರಿಶ್ರಮ ಮತ್ತು ಶಾಲಾ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಶಾಲೆ ೨೮ ವರ್ಷಗಳನ್ನು ಪೂರೈಸಿದೆ. ಪಾಠ, ಪ್ರವಚನದ ಜೊತೆಗೆ ವಿಜ್ಞಾನ, ಕಲೆ, ಕ್ರೀಡೆ ಹಾಗೂ ಇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ಅಲ್ಲದೆ ಇಲ್ಲಿಯ ವಿದ್ಯಾರ್ಥಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಅನೇಕ ಗೌರವಯುತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ರೀತಿಯ ಕಾಣಿಕೆಯನ್ನು ನೀಡುತ್ತಲಿರುವುದು ಶಾಲೆಯ ಹಿರಿಮೆ ಎಂದು ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.

ಕ್ರೆಸೆಂಟ್ ಶಾಲೆಯ ಬಗ್ಗೆ:

1992ರಲ್ಲಿ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಕ್ರೆಸೆಂಟ್‌ ಶಾಲೆಯು ಎಲ್.ಕೆ.ಜಿ. ಯಿಂದ 10ನೇ ತರಗತಿಯವರಗಿನ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ವ್ಯವಸ್ಥೆಯನ್ನು ಮಾಡಿ ಕೊಟ್ಟಿದೆ.

ಆಂಗ್ಲ ಮಾಧ್ಯಮದ ಜೊತೆಗೆ ಸಿ.ಬಿ.ಎಸ್.ಇ. ಬೋಧನಾ ವ್ಯವಸ್ಥೆಯನ್ನು ಒಳಗೊಂಡಿದ್ದು, ” ನೂರುಲ್‌ ಇಸ್ಲಾಂ ಎಜುಕೇಷನ್‌ ಸೊಸೈಟಿ ರಿ)” ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಡಿಕೇರಿಯ ಸಮೀಪವಿರುವ ಹೆಬ್ಬೇಟ್ಟಗೇರಿ ಗ್ರಾಮದ ಅಬಿಪಾಲ್ಸ್‌ಗೆ ಹೋಗುವ ಮಾರ್ಗ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮೆಡಿಕಲ್‌ ಕಾಲೇಜ್)‌ ಪಕ್ಕ 25 ಏಕರೆ ಪ್ರದೇಶವನ್ನು ಖರೀದಿಸಿ ದೊಡ್ಡ ಕ್ಯಾಂಪಸ್‌ ಮಾಡುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.

ಕ್ರೆಸೆಂಟ್‌ ಶಾಲೆಯು ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಹಾಗೂ ಬಸವೇಶ್ವರ ದೇವಾಲಯದ ನಡುವೆ 1992 ರಿಂದ ತನ್ನ ವಿದ್ಯಾದಾನವನ್ನು ಸಮಾಜಕ್ಕೆ ನೀಡುತ್ತಾ ಬರುತ್ತಿದ್ದು, ಮಡಿಕೇರಿಯ ಕ್ರೆಸೆಂಟ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ್ತ ವ್ಯಾಸಂಗ, ಉನ್ನತ್ತ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಕ್ರೆಸೆಂಟ್‌ ಶಾಲೆಯ ಸೇವಾಕಾರ್ಯಗಳು:

2018ರಲ್ಲಿ ಮಹಾಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧರ್ಮಾತೀತ ಮತ್ತು ಜಾತ್ಯತೀತವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕ್ರೆಸೆಂಟ್ ಶಾಲೆಯು, ಶಾಲಾ ಆವರಣದಲ್ಲಿ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ರಿಲೀಫ್ ಸೆಲ್, ಪ್ರಬುದ್ಧ ನೌಕರರ ಒಕ್ಕೂಟ, ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಜಿಲ್ಲೆಯ ಸಂತ್ರಸ್ತರು ಹಾಗೂ ನಾಗರಿಕರಿಗಾಗಿ ‘ಉಚಿತ ವೈದ್ಯಕೀಯ ಮಹಾಶಿಬಿರ’ ನಡೆಸಿತು.

2014ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಕ್ರೆಸೆಂಟ್ ಶಾಲೆಯಲ್ಲಿ 400 ಮಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಉತ್ತಮ ವಸತಿ ಸೌಕರ್ಯ ಕಲ್ಪಿಸಲು ವ್ಯವಸ್ಥೆ ಮಾಡಿಕೊಟ್ಟಿತು.

ಕ್ರೆಸೆಂಟ್ ಶಾಲೆ ಹಾಗೂ ಪಿ.ಪಿ.ಫೌಂಡೇಷನ್ ವತಿಯಿಂದ 2019ರ ಫೆ.9 ರಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಉಚಿತ ಶೈಕ್ಷಣಿಕ ಸಲಹಾ ಶಿಬಿರ ನಡೆಸಲ್ಪಟ್ಟಿತ್ತು.

ಕ್ರೆಸೆಂಟ್‌ ಶಾಲೆಯ ವಿದ್ಯಾರ್ಥಿಗಳ ಪ್ರತಿಜ್ಞೆ ಈ ರೀತಿ ಇದೆ:

ಭಾರತ ನನ್ನ ತಾಯಿನಾಡು,
ಎಲ್ಲಾ ಭಾರತೀಯರು ನನ್ನ ಸಹೋದರರು ಮತ್ತು ಸಹೋದರಿಯರು
ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ನನ್ನ ದೇಶದ ಶ್ರೀಮಂತ ಮತ್ತು ವಿವಿಧ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ.
ನಾನು ಯಾವಾಗಲೂ ಅದಕ್ಕೋಸ್ಕರ ಶ್ರಮಿಸುತ್ತೇನೆ.
ನನ್ನ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಎಲ್ಲಾ ಹಿರಿಯರಿಗೆ ಗೌರವಿಸುತ್ತೇನೆ ಮತ್ತು ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತೇನೆ.
ನನ್ನ ದೇಶ ಮತ್ತು ಜನರಿಗೆ, ನನ್ನ ಬದ್ಧತೆಯ ವಾಗ್ದಾನ ಮಾಡುತ್ತೇನೆ.
ಅವರ ಯೋಗಕ್ಷೇಮದ ಮತ್ತು ಅಭ್ಯುದಯದಲ್ಲಿ ನನ್ನ ಸಂತೋಷ ನೆಲೆಸಿದೆ.

admin

0 0 votes
Article Rating
Subscribe
Notify of
guest
0 Comments
Inline Feedbacks
View all comments