ವಿಶ್ವ ಜೇನು ನೊಣ ದಿನಾಚರಣೆ: ಮೇ 20

ಮೇ 20: ವಿಶ್ವ ಜೇನುನೊಣ ದಿನ-2020

ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನ 2020 ಅನ್ನು ಈ ವರ್ಷ ಮೇ 20 ರಂದು ಆಚರಿಸಲಾಗುತ್ತಿದೆ. ವಿಶ್ವ ಜೇನುನೊಣ ದಿನದ ಥೀಮ್ 2020 ರ ವಿವರಗಳು, ಉದ್ದೇಶ ಮತ್ತು ದಿನಾಂಕ. ತಿಳಿಯಲು ಮುಂದೆ ಓದಿ.

ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೇ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತಿಪ್ಪತ್ತು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು. “ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ ದಿವೋ ರಜಸ ಪೃಥಿವ್ಯಾಃ. ಸಹಸ್ರಂ ಶಂಸಾ ಎತಯೇ ಗವಿಷ್ಟೌ ಸರ್ವಾಂ ಇತ ತಾಂ ಉಪಯತಾ ಪಿಬದ್ದ್ಯೆ.” ಎಂದು ವರ್ಣಿಸಲಾಗಿದೆ.

ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ಹಾಗೂ ಜೇನು ಹುಳುಗಳು ಮಾನವ ಸಂಕುಲಕ್ಕೆ ಪ್ರಕೃತಿ ದತ್ತವಾಗಿ ಸಿಕ್ಕಿರುವ ವರ. ಜೇನುನೊಣಗಳು ಮತ್ತು ಬಾವಲಿಗಳು, ಚಿಟ್ಟೆಗಳಂತಹ ಇತರ ಪರಾಗಸ್ಪರ್ಶಕಗಳು ಕ್ರಮೇಣ ಮಾನವ ಚಟುವಟಿಕೆಗಳಿಂದಾಗಿ ಅಳಿವಿನ ಅಂಚಿನಲ್ಲಿ ಅಪಾಯದಲ್ಲಿದೆ. ತಜ್ಞರ ಪ್ರಕಾರ, ನಮ್ಮ ಪರಿಸರ ವ್ಯವಸ್ಥೆಯ ಉಳಿವು ಹೆಚ್ಚಾಗಿ ಪರಾಗಸ್ಪರ್ಶದ ಮೂಲಭೂತ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೂಬಿಡುವ ಹೆಚ್ಚಿನ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ರಾಣಿಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಅಷ್ಟೇ ಅಲ್ಲ, ಪರಾಗಸ್ಪರ್ಶಕಗಳು ಆಹಾರ ಸುರಕ್ಷತೆ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕರಿಸುತ್ತವೆ.

ಆದ್ದರಿಂದ ಪರಾಗಸ್ಪರ್ಶಕಗಳ ಪ್ರಾಮುಖ್ಯತೆ, ಅವರು ಎದುರಿಸುತ್ತಿರುವ ಬೆದರಿಕೆಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜೇನುನೊಣ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನಾಚರಣೆ 2020 ಅನ್ನು ಈ ಬಾರಿ ಮೇ 20 ರಂದು ಆಚರಿಸಲಾಗುತ್ತಿದೆ.

ವಿಶ್ವ ಜೇನುನೊಣ ದಿನ 2020:
ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ವಿಶ್ವ ಜೇನುನೊಣ ದಿನ 2020ರಲ್ಲಿ ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ರಕ್ಷಿಸುವ ಕ್ರಮಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವಿಶ್ವ ಜೇನುನೊಣ ದಿನಾಚರಣೆಯು ಜಾಗತಿಕ ಆಹಾರ ಪೂರೈಕೆ ಸರಪಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹಸಿವನ್ನು ಹೋಗಲಾಡಿಸಲು ಗಮನಾರ್ಹವಾಗಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಜೇನುನೊಣಗಳು ನೋಡಲು ಚಿಕ್ಕದಿರಬಹುದು. ಆದರೆ, ಈ ಜೇನುನೊಣಗಳ ಮೇಲೆಯೇ ಮನುಷ್ಯನ ಬದುಕು ಅವಲಂಬಿತವಾಗಿದೆ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ…! ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಸಾಧ್ಯವಿಲ್ಲ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ಜೇನುನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಹೀಗಾಗಿ, ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ. ಮನುಷ್ಯ ತಿನ್ನುವ ಶೇ 70ರಷ್ಟು ಆಹಾರ ಜೇನುನೊಣಗಳನ್ನೇ ಅವಲಂಬಿಸಿದೆ ಎಂದಾಗಲೇ ಇವುಗಳ ಮಹತ್ವ ಎಂತಹದ್ದು ಎಂಬುದು ಗೊತ್ತಾಗುತ್ತದೆ. ಬಾಕಿ ಉಳಿದ ಶೇ. 30 ಚಿಟ್ಟೆ , ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಬಿಸಿದೆ. ಹೀಗಾಗಿ, ಜೇನುನೊಣಗಳು ಇಲ್ಲದೇ ಇದ್ದರೆ ನಾವು ತಿನ್ನುವ ಯಾವ ವಸ್ತುವೂ ನಮ್ಮ ಕೈಸೇರದು! ಆದರೆ, ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದಿಢೀರ್ ಆಗಿ ಜೇನುನೊಣಗಳು ಸಾವನ್ನಪ್ಪುತ್ತಿವೆ. ಇದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಿಶ್ವ ಜೇನುನೊಣ ದಿನದ ಹಾಗೂ ಈ ದಿನಾಂಕ ಮತ್ತು ಉದ್ದೇಶ ಏಕೆ?
ಮೇ 20 ರಂದು, ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು, ಆದ್ದರಿಂದ ಪ್ರತಿ ವರ್ಷ ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ, ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು. ವಿಶ್ವ ಜೇನುನೊಣ ದಿನ 2020 ಈ ವರ್ಷದ ಮೇ 20 ಬುಧವಾರದಂದು ಬರುತ್ತದೆ. ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು.

2020ರ ವಿಶ್ವ ಜೇನುನೊಣ ದಿನದ ಥೀಮ್:
ವಿಶ್ವ ಜೇನುನೊಣ ದಿನ-2020 ರ ವಿಷಯವು ಯು.ಎನ್ (ವಿಶ್ವ ಸಂಸ್ಥೆ) ಪ್ರಕಾರ “ಜೇನುನೊಣಗಳನ್ನು ಉಳಿಸಿ”. ವಿಶ್ವ ಜೇನುನೊಣ ದಿನ 2020 ರ ವಿಷಯವು ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳ ರಕ್ಷಣೆಯನ್ನು ಒತ್ತಿಹೇಳುತ್ತದೆ. ಅಷ್ಟೇ ಅಲ್ಲ, ವಿಶ್ವ ಜೇನುನೊಣ ದಿನ 2020 ವಿಷಯವು ಪರಾಗಸ್ಪರ್ಶಕಗಳ ನೈಸರ್ಗಿಕ ಆವಾಸಸ್ಥಾನವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ವಿಶ್ವ ಜೇನುನೊಣ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ವಿಶ್ವ ಜೇನುನೊಣ ದಿನವನ್ನು ಜಗತ್ತಿನಲ್ಲಿ ಸಾಕಷ್ಟು ಹುಮ್ಮಸ್ಸು ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ವಿಶ್ವ ಜೇನುನೊಣ ದಿನದ ಮಹತ್ವದ ಬಗ್ಗೆ ಮಾತನಾಡುವ ಚಟುವಟಿಕೆಗಳು, ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಬಹಳಷ್ಟು ಸಂಸ್ಥೆಗಳು ಒಗ್ಗೂಡುತ್ತಿವೆ. ಚಾರಿಟಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ಇದರಿಂದ ಜನರು ಜೇನುನೊಣ ಪ್ರಭೇದಗಳನ್ನು ಸಂರಕ್ಷಿಸಲು ಸಹಕರಿಸುವಂತಾಗುತ್ತದೆ. ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ, 2020 ರ ವಿಶ್ವ ಜೇನುನೊಣ ದಿನದಂದು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಏಕೆಂದರೆ ಸರ್ಕಾರದ ಆದೇಶದಂತೆ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ.

ಜೇನುಸಾಕಣೆದಾರರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಸಾಮಾನ್ಯವಾಗಿ ಜೇನುಹುಳು ಎಂದರೆ ಹೆದರುವ ಹೆಂಗಸರೇ ಹೆಚ್ಚು. ಮನೆಯಲ್ಲೇ ಇರುವ ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗ ಜೇನು ಕೃಷಿ. ಜೇನುಸಾಕಣೆ ಲಾಭದಾಯಕ ಉಪಕಸುಬು. ಇದಕ್ಕೆ ಕಾಲೇಜು ಡಿಗ್ರಿ ಬೇಡ. ಮುಖ್ಯವಾಗಿ ಬೇಕಾಗಿರುವುದು ಮನಸ್ಸು ಮತ್ತು ಜೇನುಹುಳುಗಳ ಮೇಲೆ ಪ್ರೀತಿ ಅಷ್ಟೆ. ಅಂಗೈ ಅಗಲ ಜಾಗ ಇದ್ದರೂ ಸಾಕು, ಜೇನು ಬೇಸಾಯ ಮಾಡಬಹುದು. ಒಂದೆರಡು ಜೇನುಪೆಟ್ಟಿಗೆಗಳನ್ನು ಇಟ್ಟರೆ ಮನೆಗೆ ಬೇಕಾದಷ್ಟು ಜೇನುತುಪ್ಪ ಉತ್ಪಾದಿಸಬಹುದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಪೆಟ್ಟಿಗೆ ಇಟ್ಟರೆ ದುಡ್ಡು ಸಂಪಾದಿಸಬಹುದು. ರೈತಮಹಿಳೆಯರು ದುಡ್ಡಿನ ಜೊತೆಗೆ ಜಮೀನಿನಲ್ಲಿ ಗುಣಮಟ್ಟದ ಬೆಳೆ ಪಡೆಯಬಹುದು. ಮಹಿಳೆಯರು ಹವ್ಯಾಸವಾಗಿಯೂ ಈ ವೃತ್ತಿಯನ್ನು ಕೈಗೊಳ್ಳಬಹುದು. ಜೇನುತುಪ್ಪ ತಿನ್ನಲು ಸವಿ, ಆರೋಗ್ಯಕ್ಕೂ ಉತ್ತಮ. ಹಲವಾರು ಜೇನು ಸಾಕಾಣಿಕೆ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳೂ ಜೇನು ತಿನ್ನಬಹುದು.

ಜೇನು ಸಾಕಾಣಿಕೆಯು ಕೃಷಿಯ ಅವಿಭಾಜ್ಯ ಅಂಗ ಆಗಬೇಕು. ಇದು ಕೃಷಿ-ತೋಟಗಾರಿಕೆಯ ಉಪಕಸುಬು ಮಾತ್ರವಲ್ಲ, ಬೆಳೆಗಳ ಇಳುವರಿ ಹೆಚ್ಚಳಕ್ಕೂ ನೆರವಾಗುತ್ತದೆ. ಜೇನು ಹುಳದ ಪರಾಗ ಸ್ಪರ್ಶದಿಂದ ಕಾಫಿ ಬೆಳೆಯಲ್ಲಿ ಕಾಫಿ ಹೂಗಳಲ್ಲಿ ಇಳುವರಿ ಅಧಿಕ ಪಡೆಯಲು ಸಾಧ್ಯವಾಗಿದೆ. ಆಸಕ್ತ ರೈತರಿಗೆ ಮತ್ತು ಯುವ ರೈತರು ಕೃಷಿಯಲ್ಲಿ ತೊಡಗಿಕೊಳ್ಳಲು ಜೇನು ಸಾಕಾಣಿಕೆಯು ಒಂದು ಉತ್ತಮ ಆಯ್ಕೆಯಾಗಿದೆ.

ಕೊಡಗಿನ ಜೇನು ತುಪ್ಪಕ್ಕೆ ಯಾವದೇ ಬ್ರಾಂಡ್ ಹೆಸರು ಅವಶ್ಯಕತೆ ಬರುವದಿಲ್ಲ. ಇಲ್ಲಿನ ಜೇನು ತುಪ್ಪ ಅದರದೇ ಆದ ಮಹತ್ವ ಹೊಂದಿದೆ. ಹೊರಗಿನ ಜೇನು ತುಪ್ಪಗಳನ್ನು ಖರೀದಿಸಿ ತಂದು ಇಲ್ಲಿನ ಜೇನು ತುಪ್ಪದ ಮಹತ್ವವನ್ನು ಹಾಳು ಮಾಡುತ್ತಿರುವದನ್ನು ತಡೆಯಬೇಕಿದೆ.

ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ತೋಟಗಾರಿಕಾ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಜೇನು ನೊಣವು ಕೃಷಿ ಚಟುವಟಿಕೆಯ ಒಟ್ಟು ಶೇ. 30 ಇಳುವರಿಯನ್ನು ಹೆಚ್ಚಿಸುತ್ತವೆ. ಜೇನು ನೊಣದ ಸಂಖ್ಯೆ ಕಡಿಮೆಯಾದರೆ ತರಕಾರಿ, ಹಣ್ಣು ಇಂತಹ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಆದರಿಂದ ಜೇನು ನೊಣದ ಸಂರಕ್ಷಣೆ ಮಾಡುವದು ಉತ್ತಮ ಮಾರ್ಗವಾಗಿದೆ.

ಎಷ್ಟೇ ಪ್ರಯತ್ನ ಪಟ್ಟುರು ಜೇನಿನ ಹುಳುಗಳಷ್ಟು ಚುರುಕು ತನದಿಂದ ಕೂಡಿರಲು ಮನುಷ್ಯನಿಂದ ಸಾಧ್ಯವೇ ಇಲ್ಲ. ಜೀವ ಸಂಕುಲಗಳ ಪೈಕಿ ಜೇನು ಅತ್ಯಂತ ಹೆಚ್ಚು ಚುರುಕುತನ ಹಾಗೂ ಕ್ರಿಯಾಶೀಲ ಜೀವಿ. ಅಷ್ಟೇ ಅಲ್ಲ ತನ್ನ ಕ್ರಿಯಾತ್ಮಕ ಕೆಲಸದ ಮೂಲಕ ಮನುಷ್ಯನ ಬದುಕಿನ ಅತಿ ಮುಖ್ಯ ವಸ್ತುಗಳಲ್ಲಿ ಒಂದಾದ ಜೇನನ್ನೂ ಸಹ ಅದು ಪೂರೈಸುತ್ತದೆ. ಈ ನಿಟ್ಟಿನಲ್ಲಿ ಜೇನುನೊಣಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಅದಕ್ಕೇನು ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಾವಿದ್ದ ಪರಿಸರ ಚೆನ್ನಾಗಿಟ್ಟರೆ ಅಷ್ಟೇ ಸಾಕು. ಆದಷ್ಟು ಸಾವಯವ ಕೃಷಿ ಪದ್ಧತಿ ಅನುಸರಿಸುವುದು, ಮರಗಿಡಗಳನ್ನು ಬೆಳೆಸಬೇಕಷ್ಟೇ. ನೆನಪಿರಲಿ… ಜೇನುನೊಣವಿದ್ದರೆ ನಾವಿರುತ್ತೇವೆ.

ಜೇನುನೊಣಗಳು ಅನ್ನದಾತರ ಮಿತ್ರ. ಬೆಳೆ ಬೆಳೆಯು ವಾಗಲೂ ಈ ನೊಣಗಳ ಪಾತ್ರ ಬಲು ಮಹತ್ವವಾದುದು. ಇದು ಹಲವರಿಗೆ ಆದಾಯದ ಮೂಲವೂ ಹೌದು. ಬದುಕಿನುದ್ದಕ್ಕೂ ಬೇರೆಯವರಿಗೇ ಸಿಹಿ ಕೊಡಲು ಕಷ್ಟಪಡುವ ಈ ಪುಟ್ಟ ಜೀವಗಳು ಈಗ ಕಹಿ ನುಂಗುತ್ತಿವೆ. ಬದುಕನ್ನೇ ಕಳೆದುಕೊಳ್ಳುತ್ತಿವೆ. ಕೊಡಗಿನ ಕೃಷಿಕರಾದ ನಾವು ಜೇನು ಕೃಷಿಯಲ್ಲಿ ತೊಡಗಿಸಿಕೊಂಡು, ಜೇನುನೊಣವನ್ನು ಉಳಿಸಿ ಮನುಕುಲದ ಸುಮಧುರ ಬದುಕಿಗೆ ನಾಂದಿ ಹಾಡೋಣ. ಜೇನುನೊಣಗಳ ಉಳಿವಿಗೆ ಎಲ್ಲರೂ ಕಟಿಬದ್ಧರಾಗೋಣ.

ಲೇಖಕರು: ✍. ಅರುಣ್ ಕೂರ್ಗ್

ಅರುಣ್‌ ಕೂರ್ಗ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments