“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ

“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ

ಸೌರಮಾನ ಯುಗಾದಿ’ ಎಂದೇ ಜನಪ್ರಿಯವಾಗಿರುವ ‘ವಿಷು’ ಹೊಸ ವರ್ಷಕ್ಕೆ ನವ ಚೈತನ್ಯವನ್ನು ತುಂಬುವ, ಹೊಸ ಸಂವತ್ಸರವನ್ನು ಸ್ವಾಗತಿಸುವ ಹಬ್ಬ. ತುಳುವರಿಗೆ ಇದು ‘ಬಿಸು ಪರ್ಬ’ ವಾದರೆ, , ಕೇರಳೀಯರಿಗೆ ‘ವಿಷು’, ತಮಿಳುನಾಡಿನಲ್ಲಿ ‘ಪುತ್ತಾಂಡ್’, ಪಂಜಾಬಿಗಳಿಗೆ ‘ಬೈಸಾಕಿ’, ಅಸ್ಸಾಂನಲ್ಲಿ ಇದು ‘ಬಿಹು’ ಉತ್ತರಾಖಂಡ, ಹರಿಯಾಣ ರಾಜ್ಯಗಳ ಜನರಿಗೂ ಇದು ಇದೇ ಹೊಸ ವರ್ಷ ಆಗಮನದ ದಿನ.

ವಿಷು ಪ್ರಕೃತಿ ಮಾತೆಯ ಪೂಜೆ ಮಾಡುವ ಹಬ್ಬ. ನಾಡಿನ ಜನರು ಸುಖ ಸಂತೋಷ ನೆಮ್ಮದಿಯಿಂದ ಬಾಳಬೇಕಾದರೆ ಪ್ರಕೃತಿ ಮಾತೆ ಸಂತುಷ್ಟಳಾಗಿರಬೇಕು. ಅದಕ್ಕೆ ಈ ವಿಷು ಹಬ್ಬದ ಆಚರಣೆ. ವಿಷು ಕೇರಳ ಮತ್ತು ತುಳುನಾಡು ಪ್ರದೇಶದಲ್ಲಿ, ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ವಿಷುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದುವೇ ಬಿಸು. ತುಳು ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ ‘ಬಿಸು’ ವಾಗಿಯೂ ಕೇರಳದಲ್ಲಿ ‘ವಿಷು’ವಾಗಿಯೂ ಅಚರಿಸಲ್ಪಡುವ ವಿಷು ಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ ‘ಬಿಶು’ ಎಂಬುದಾಗಿ ಇದನ್ನು ಸಂಭ್ರಮಿಸಿದರೆ ಪಂಜಾಬ್ ನಲ್ಲಿ ‘ಬೈಸಾಕಿ’ ಮತ್ತು ತಮಿಳುನಾಡಿನಲ್ಲಿ ‘ಪುತ್ತಾಂಡ್’ ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಎಪ್ರಿಲ್ ತಿಂಗಳ ಎರಡನೇ ವಾರ ಅಂದರೆ ಎಪ್ರಿಲ್ ೧೪ರಂದು ಬಿಸುವನ್ನು ಆಚರಿಸುತ್ತಾರೆ. ಇದೊಂದು ಕೃಷಿಗೆ, ಕೃಷಿಕರಿಗೆ ಸಂಬಂಧಿಸಿದ ಹಬ್ಬ. ವಿಷು ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುವ ಉತ್ಸವ.

ವಿಷು ಕಣಿ ಹಾಗೂ ಕೊನ್ನೆ ಹೂವು:
ಮಲೆಯಾಳಿಗಳು ವಿಷು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು ಅವರಲ್ಲಿ ಕೊನ್ನೆ ಹೂವಿಗೆ ಪ್ರಧಾನ ಆದ್ಯತೆ. ಈ ಸಂವತ್ಸರದಲ್ಲಿ ಕೊನ್ನೆ ಹೂ ಎಲ್ಲೆಡೆಗಳಲ್ಲಿ ಮರ ತುಂಬಾ ಪಸರಿಸಿಕೊಂಡು ಜನರನ್ನು ಆಕರ್ಷಿಸುತ್ತದೆ. ಹಳದಿ ಬಣ್ಣದಲ್ಲಿರುವ ಈ ಹೂವನ್ನು ಕಣಿಯಲ್ಲಿರಿಸಿ ಪೂಜಿಸಲಾಗುತ್ತದೆ. ಕೊನ್ನೆ ಹೂ ಇಲ್ಲದ ವಿಷುಕಣಿ ನಿಜವಾದ ಕಣಿಯೇ ಅಲ್ಲ ಎಂಬ ಮಾತು ಮಲೆಯಾಳಿಗರಲ್ಲಿದೆ. ಬೇರೆ ಯಾವುದೇ ದಿನಗಳಲ್ಲಿ ಕೊನ್ನೆ ಹೂವನ್ನು ದೇವರಿಗೆ ಅರ್ಪಿಸದೇ ಇರುವುದೂ ವಿಶೇಷ.
ವಿಷು ಆಚರಣೆಯಲ್ಲಿ ಈ ವಿಷು ಕಣಿಗೆ ಪ್ರಧಾನ ಪಾತ್ರ. ನಾಡಿನ ಪ್ರತಿ ಮನೆಯಲ್ಲಿಯೂ ವಿಷು ಕಣಿಯನ್ನು ಹಬ್ಬದ ಹಿಂದಿನ ರಾತ್ರಿ ಇರಿಸಲಾಗುತ್ತದೆ. ಕಣಿಯಲ್ಲಿ ತಮ್ಮ ಮನೆ ತೋಟದಲ್ಲಿ ಬೆಳೆದ ಫಲವನ್ನು ಅದರಲ್ಲಿ ಸಮರ್ಪಿಸಲಾಗುತ್ತದೆ. ಅಕ್ಕಿ, ತೆಂಗಿನಕಾಯಿ, ತರಕಾರಿ, ಹಣ್ಣು ಹಂಪಲು, ಚಿನ್ನದ ಆಭರಣ ಸೇರಿದಂತೆ ನಮ್ಮಲ್ಲಿ ಲಭ್ಯವಿರುವ ಎಲ್ಲಾ ವಸ್ತುಗಳನ್ನು ಕಣಿಯಲ್ಲಿಟ್ಟು ಪೂಜಿಸುವುದು ಸಂಪ್ರದಾಯ. ಹಿಂದಿನ ರಾತ್ರಿ ಇಟ್ಟ ಕಣಿಯ ದರ್ಶನವನ್ನು ಮರು ದಿನ ಎದ್ದೊಡನೆ ಕಣಿಯಲ್ಲಿರಿಸಿದ ಕನ್ನಡಿಯಲ್ಲಿ ಮುಖ ನೋಡಿ, ಕುಂಕುಮವನ್ನು ಲೇಪಿಸಿ, ಗುರು ಹಿರಿಯರ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆಸಿಕೊಂಡು ಬಂದ ಕ್ರಮ. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ.

ಪ್ರತಿ ದೇವಾಲಯಗಳಲ್ಲೂ ವಿಷು ಕಣಿಯನ್ನಿಟ್ಟು ಸಮೀಪದ ದೇವಸ್ಥಾನಕ್ಕೆ ಹೋಗಿ ಭಕ್ತಾದಿಗಳು ಕಣಿ ದರ್ಶನ ಮಾಡಿ ಬರುತ್ತಾರೆ. ಹೀಗೆ ಪ್ರಕೃತಿ ಮಾತೆಯ ಒಡಲಲ್ಲಿ ಬೆಳೆದ ಫಸಲುಗಳನ್ನು ಪೂಜಿಸಿ ದೇವರಲ್ಲಿ ಸುಖ ಸಮೃದ್ಧಿ ಹಾಗೂ ಶಾಂತಿಯುತ ಜೀವನಕ್ಕಾಗಿ ಬೇಡುವುದು ವಿಷು ಕಣಿಯ ವಿಶೇಷ.

ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ. ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ. ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷ, ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು ಭತ್ತದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕಮಾತ್ರವಾಗಿ ಕಂಡಿದ್ದಾರೆ. ಎನ್ನುವುದು ಕಂಡು ಬರುತ್ತದೆ. ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮುಂದುವರಿಯುತ್ತದೆ ಎಂಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗು ನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಎಂದು ಹಿಂದಿನಿಂದಲೂ ನಡೆದೂ ಬಂದ ಪ್ರತೀತಿ.

ಯುಗಾದಿಯಲ್ಲಿ ಬೇವು ಬೆಲ್ಲ ತಿಂದು, ಜೀವನದಲ್ಲಿ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ದೃಢ ಮನಸ್ಸಿನೊಂದಿಗೆ ಹೊಸ ಯುಗಕ್ಕೆ ಸ್ವಾಗತ. ಆದರೆ ‘ವಿಷು’ ಹಬ್ಬ ಇದಕ್ಕಿಂತ ಭಿನ್ನ. ಇದು ಪ್ರಕೃತಿಯ ಪೂಜೆಗೆ ಮೀಸಲು. ಭೂ ತಾಯಿಯ ಒಡಲಲ್ಲಿ ಬೆಳೆದ ಫಸಲುಗಳನ್ನು ಪೂಜಿಸುವ ಮೂಲಕ ಹೊಸ ವರ್ಷದಲ್ಲಿ ಸಂಪದ್ಭರಿತ ಕೃಷಿ, ಸುಖ ಜೀವನ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ದಿನದ ವಿಶೇಷ. ಹಾಗಾಗಿ ವಿಷು ಹಬ್ಬವನ್ನಾಚರಿಸುವ ಎಲ್ಲರ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಉಂಟಾಗಲಿ ಎಂದು ಹಾರೈಸೋಣ.

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments