
ಶನಿವಾರಸಂತೆ: ಶಾದಿ ಭಾಗ್ಯ, ಟಿಪ್ಪು ಜಯಂತಿಗಳು ಬೇಕೆಂದು ಯಾರೂ ಕೇಳಿರಲಿಲ್ಲ, ಅವು ಅಂದಿನ ಕಾಂಗ್ರೆಸ್ ಸರ್ಕಾರದ ಒಡೆದಾಳುವ ನೀತಿಯ ತಂತ್ರಗಳಾಗಿದ್ದವು ಎಂದು ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಶಾದಿ ಭಾಗ್ಯ ಕೆಟ್ಟ ಯೋಜನೆ ಎಂದು ಹೇಳುತ್ತಿಲ್ಲ. ಆದರೆ ಅದರ ಅಗತ್ಯವೇ ಇರಲಿಲ್ಲ. ಯೋಜನೆಗೆ ಭಾರೀ ಪ್ರಚಾರ ಕೊಡಲಾಯಿತೇ ವಿನಃ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಎಂದು ಅಪ್ಪಚ್ಚು ರಂಜನ್ ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಹೇಳಿದರು. ಶಾದಿ ಭಾಗ್ಯ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಮಾತ್ರ ಎಂಬುದು ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿತೇ ವಿನಃ, ಅದರಿಂದ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದರು.
ಟಿಪ್ಪು ಜಯಂತಿ ಸೃಷ್ಟಿಸಿದ ಅನಾಹುತ ಎಲ್ಲರಿಗೂ ಗೊತ್ತೇ ಇದೆ, ವಿವರಿಸಿ ಹೇಳುವ ಅಗತ್ಯವಿಲ್ಲ ಎಂದ ಅಪ್ಪಚ್ಚು ರಂಜನ್ ಜನತಂತ್ರದಲ್ಲಿ ಜನರಿಗೆ ಬೇಡದ ವಿಷಯಗಳನ್ನು ಅವರ ಮೇಲೆ ಹೇರಲಾಗುವುದಿಲ್ಲ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ಜಿ. ಮೇದಪ್ಪ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು