ಪುತ್ತರಿ ಕಳೆದು ಮೊದಲ ಭಾನುವಾರ ಕೋಲ್ ಮುಂದ್
ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಅನ್ನು ಪುತ್ತರಿ ಕಳೆದ ಮೊದಲ ಭಾನುವಾರ ವಿಜೃಂಭಣೆಯಿಂದ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು. ಬೊಟ್ಟಿಯತ್ ನಾಡ್ ತಕ್ಕ ಹಾಗೂ ಕೈಮುಡಿಕೆ ಮಂದ್ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಉಪಸ್ಥಿತರಿದ್ದರು
ಪುತ್ತರಿ ಹಬ್ಬವು ಒಂದು ಮೂಲದ ಪ್ರಕಾರ ಇದೇ ನವೆಂಬರ್ 27 ಅಥವಾ 28ರಂದು ನಡೆಯಲಿದೆ. ಮೂರು ನಾಡಿಗೆ ಸೇರಿದ ಕೋಲ್ ಮಂದ್ ಅನ್ನು ವಿಜೃಂಭಣೆಯಿಂದ ನಡೆಸುವ ಉದ್ದೇಶದಿಂದ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಭಾನುವಾರ ಅಂದರೆ ಡಿಸೆಂಬರ್ 03ರಂದು ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಮೂರು ನಾಡಿನವರಿಂದ ಸಾಮೂಹಿಕ ಪುತ್ತರಿ ಕೋಲಾಟ್ ಬಳಿಕ ಸಾರ್ವಜನಿಕವಾಗಿ ವಿವಿಧ ಪೈಪೋಟಿಯನ್ನು ಏರ್ಪಡಿಸಲು ಸಭೆ ತಿರ್ಮಾನಿಸಿತು. ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋಪಾಟ್, ಕೊಡವ ಪಾಟ್ ಹಾಗೂ ವಾಲಗತಾಟ್ ಪೈಪೋಟಿಗಳನ್ನು ತಲಾ ಎರಡು ವಿಭಾಗಗಳಾಗಿ ನಡೆಸಲು ತಿರ್ಮಾನಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಂದು ವಿಭಾಗ, ಕಾಲೇಜು ಮತ್ತು ಸಾರ್ವಜನಿಕರು ಸೇರಿ ಮತ್ತೊಂದು ವಿಭಾಗದಲ್ಲಿ ಪೈಪೋಟಿ ನಡೆಯಲಿದೆ. ಮೂರು ನಾಡಿನವರಿಗೆ ಮಾತ್ರ ಸೀಮಿತವಾಗಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಒಂದು ನಾಡಿನಿಂದ ಎರಡು ವಿಭಾಗದಲ್ಲೂ ತಲಾ ಎರಡೆರಡು ತಂಡಗಳು ಅಂದರೆ ಎ ಟೀಂ ಹಾಗೂ ಬಿ.ಟೀಂ ಎಂದು ಭಾಗವಹಿಸಬಹುದಾಗಿದೆ. ಬುಡಕಟ್ಟು ಆದಿವಾಸಿಗಳಿಗಾಗಿ ಯರವಾಟ್ ಪೈಪೋಟಿ ಹಾಗೂ ಚೀನಿದುಡಿ ನುಡಿಸುವ ಪೈಪೋಟಿ ಏರಾಪಡಿಸಲು ಸಭೆ ತಿರ್ಮಾನಿಸಿತು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಅವರನ್ನು ಕರೆಸಲು ತಿರ್ಮಾನಿಸಲಾಯಿತು. ಪ್ರತಿವರ್ಷ ಮೂರು ನಾಡಿನ ಪರವಾಗಿ ಸಾಧಕರೊಬ್ಬರನ್ನು ಗೌರವಿಸುತ್ತಿದ್ದು ಈ ಬಾರಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯನವರನ್ನು ಸನ್ಮಾನಿಸುವಂತೆ ಸಭೆ ತಿರ್ಮಾನಿಸಿತು. ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ ಸೇರಿದಂತೆ ಮೂರು ನಾಡಿನ ಊರು ತಕ್ಕರು, ದೇವ ತಕ್ಕರು, ಭಂಡಾರ ತಕ್ಕರು ಸೇರಿದಂತೆ ಮೂರು ನಾಡಿನವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳ ದಾನಿ ಕಡೇಮಾಡ ಪ್ರಕಾಶ್ ಹಾಗೂ ಕೈಮುಡಿಕೆ ಮಂದ್ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿ ಮೃತರಾದ ಮಳವಂಡ ಅರುಣ್ ಅಪ್ಪಣ್ಣ ಅವರಿಗೆ ಒಂದು ನಿಮಿಷ ಮೌನ ಆಚರಿಸಲಾಯಿತು. ಹಾಗೂ ಅವರ ಜಾಗಕ್ಕೆ ನೂತನ ಕಾರ್ಯದರ್ಶಿಯಾಗಿ ಬೇರಳಿ ನಾಡಿನ ಉಮೇಶ್ ಕೇಚಮಯ್ಯ ಅವರನ್ನು ಹಾಗೂ ಸಹ ಕಾರ್ಯದರ್ಶಿಯಾಗಿ ಅಪ್ಪಂಡೇರಂಡ ಮನು ಮೋಹನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಯಿತು.