ಕೊಕ್ಕಂಡ ನಮಿತಾ ಬಿದ್ದಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾತೂರು (Gram Panchayat: Hathur)
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೊಕ್ಕಂಡ ನಮಿತಾ ಬಿದ್ದಪ್ಪ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಕೊಕ್ಕಂಡ ನಮಿತಾ ಬಿದ್ದಪ್ಪರವರು “ ನನ್ನ ವಿವಾಹದ ನಂತರ ನನ್ನ ಪತಿಯ ತಂದೆ ಮಾವನವರಾದ ಕೊಕ್ಕಂಡ ಅಯ್ಯಪ್ಪನವರು ಆಗಿನ ರಾಜಕೀಯ ಪಕ್ಷವಾದ ಜನಸಂಘದ ಕಟ್ಟಾಳು ಆಗಿದ್ದರು. ಗೋಣಿಕೊಪ್ಪಲು ಎ.ಪಿ.ಸಿ.ಎಂ.ಎಸ್. ನ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲೂ ಸೇವೆಸಲ್ಲಿಸಿದ್ದರು. ಅದೇ ರೀತಿ ನನ್ನ ಪತಿ ಕೊಕ್ಕಂಡ ಬಿದ್ದಪ್ಪನವರು ಗೋಣಿಕೊಪ್ಪಲು ಎ.ಪಿ.ಸಿ.ಎಂ.ಎಸ್. ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರ ರಾಜಕೀಯ, ಸಹಕಾರ ಹಾಗೂ ಸಾಮಾಜಿಕ ಕಾರ್ಯಗಳಿಂದ ಪ್ರೇರಣೆಗೊಂಡು ನಾನೂ ಕೂಡ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ.
ಈ ಹಿಂದೆ ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರದಲ್ಲಿದ್ದ ಸಂಧರ್ಭ ನಮ್ಮ ಭಾಗದ ಶಾಸಕರಾಗಿದ್ದ ಕೆ.ಜಿ. ಬೋಪಯ್ಯನವರ ಅನುದಾನದಿಂದಾಗಿಯೇ ಹೆಚ್ಚಿನ ಕಚ್ಚಾ ರಸ್ತೆಗಳು ಪಕ್ಕಾ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಇಂದು ಪಂಚಾಯಿತಿಯ ಎಲ್ಲಾ ಭಾಗಗಳಿಗೂ ಕಾಲೋನಿಗಳಿಗೂ ರಸ್ತೆಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಮನೆಗಳಿಗೂ ನೀರಿನ ವ್ಯವಸ್ಥೆ ಶೇಕಡ. 100% ರಷ್ಟುಆಗಿರುತ್ತದೆ. ಸಮುದಾಯ ಭವನ, ದೇವಸ್ಥಾನ, ಮತ್ತು ಅಂಗನವಾಡಿಗಳಿಗೆ ಪಂಚಾಯಿತಿ ವತಿಯಿಂದ ಬೀದಿ ದೀಪ, ಸೋಲಾರ್ ದೀಪಗಳ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತೋಡು ಮತ್ತು ಕೆರೆಗಳ ಹೂಳೆತ್ತುವ ಕಾರ್ಯ ಮುಗಿದಿರುತ್ತದೆ.
ಸರ್ಕಾರದಿಂದ ದೊರೆಯುವ ಅನುದಾನವನ್ನು ವಿಂಗಡಿಸಿ ಅದರಲ್ಲೂ ಎಸ್ಸಿ ಕಾಲೋನಿಗಳಿಗೂ ಮತ್ತು ದಿವ್ಯಾಂಗದ ಜನರಿಗೂ ಸಮರ್ಪಕವಾಗಿ ಬಿತ್ತರಿಸಲಾಗುತಿದೆ. ದಿವ್ಯಾಂಗರ ಮನೆಗಳಿಗೆ ಅಡುಗೆ ಉಪಕರಣಗಳಾದ ಕುಕ್ಕರ್ ಮತ್ತು ಸೋಲಾರ್ ದೀಪಗಳನ್ನು ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಬಿಪಿಎಲ್ ಕಾರ್ಡಿನ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಪಂಚಾಯತಿ ವ್ಯಾಪ್ತಿಯ ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುವ ಸಂದರ್ಭದಲ್ಲಿ ಅವರ ಕಷ್ಟಗಳ ಪರಿಹಾರಕ್ಕೆ ಸಕಾಲದಲ್ಲಿ ಸ್ಪಂದಿಸಿರುತ್ತೇನೆ. ಪಂಚಾಯತಿಯ ನರೇಗಾ ಕಾಮಗಾರಿಗಳನ್ನು ನಿರ್ವಹಿಸಲು ಸಮೀಕ್ಷೆಗೆ ಜಿಪಿಎಸ್ ಮಾಡಲು ಬರುವ ಅಧಿಕಾರಿಗಳಿಗೆ ತೊಂದರೆ ಅನುಭವಿಸುವಂತಹದು ಹಲವು ಸಂದರ್ಭಗಳಲ್ಲಿ ತುಂಬಾ ಆಗಿದೆ. ಏಕೆಂದರೆ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿರುವುದರಿಂದ ಅಧಿಕಾರಿಗಳಿಗೆ ನಿಖರವಾಗಿ ಜಿಪಿಎಸ್ ವ್ಯವಸ್ಥೆಯಲ್ಲಿ ಸಮಿಕ್ಷೆ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ನರೇಗಾ ಯೋಜನೆಯು ಕೊಡಗಿನಂತಹ ಗುಡ್ಡಗಾಡು ಪ್ರದೇಶಗಳಿಗೆ ಸೂಕ್ತವಾದ ವ್ಯವಸ್ಥೆ ಅಲ್ಲ ಎಂಬುವುದು ನನ್ನ ಅನಿಸಿಕೆಯಾಗಿದೆ.
ನಮ್ಮ ಈಗಿನ ಶಾಸಕರಾದಂತಹ ಪೊನ್ನಣ್ಣನವರು ಹಾಗೂ ಎಂಎಲ್ಸಿ ಸುಜುಕುಶಾಲಪ್ಪನವರು ಆಗಮಿಸಿ ಪಂಚಾಯಿತಿ ಹೊಸ ಆಡಳಿತ ಕಛೇರಿಯ ಕಟ್ಟಡದ ಉದ್ಘಾಟನೆ ಮಾಡಿರುತ್ತಾರೆ. ಎಲ್ಲ ಮೂಲಗಳಿಂದ ಬರುವ ಆದಾಯಗಳಿಂದ ಪಂಚಾಯಿತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ನಮ್ಮ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡಾವಣೆಗಳ ಬೇಡಿಕೆ ಹೆಚ್ಚಿದ್ದು, ನಗರೀಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಅದರೊಂದಿಗೆ ಕೃಷಿ ಭೂಮಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಸಾಗಬೇಕಿದೆ. ಜೊತೆಗೆ ಕಾಡು ಪ್ರಾಣಿಗಳಿಂದ ಕೃಷಿಕರಿಗೆ ತೊಂದರೆಯಾಗುತ್ತಿದ್ದು ಇದರ ಬಗ್ಗೆ ಸರಕಾರ ಗಮನಹರಿಸಬೇಕಿದೆ. ಆನೆಗಳ ಹಾವಳಿ ತಡೆಯಲು ಕಂದಕಗಳನ್ನು ಅರಣ್ಯ ಇಲಾಖೆಯಿಂದ ಮಾಡಿ ಕೊಡುತ್ತಿದ್ದಾರೆ ಎಲ್ಲಾ ಇಲಾಖೆಯವರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.
ನನ್ನ ಆಡಳಿತ ಅವಧಿಯಲ್ಲಿ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ ನೀಡಲಾಗುವುದು. ಗ್ರಾಮ ಪಂಚಾಯತಿಯ ಅಧಿಕಾರಿಗಳು ಸದಸ್ಯರುಗಳು ಹಾಗೂ ಇತರ ಎಲ್ಲಾ ಕೆಲಸಗಾರರು ಕೂಡ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ನನ್ನ ಮಾವನವರದ ದಿವಂಗತ ಕೊಕ್ಕಡ ಎಂ. ಆಯ್ಯಪ್ಪನವರು ಸಮಾಜ ಸೇವೆ ಮಾಡುವುದನ್ನು ಆದರ್ಶವಾಗಿಟ್ಟುಕೊಂಡು ಜೊತೆಗೆ ಪತಿಯವರಾದ ಕೊಕ್ಕಂಡ ಬಿದ್ದಪ್ಪನವರು ನನ್ನ ಸಾಮಾಜಿಕ ಕೆಲಸ ಕಾರ್ಯಗಳಿಗೆ ತುಂಬಾ ಸಹಕಾರ ನೀಡುತ್ತಿದ್ದಾರೆ”
ಕೊಕ್ಕಂಡ ನಮಿತಾ ಬಿದ್ದಪ್ಪರವರು ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಮಂಡಲ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಸಾಮಾಜಿಕವಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಲತಃ ಕೃಷಿಕರಾಗಿರುವ ಶ್ರೀಮತಿ ಕೊಕ್ಕಂಡ ನಮಿತಾ ಬಿದ್ದಪ್ಪನವರು ನಿವೃತ್ತ ಶಿಕ್ಷಕರಾದ ಮಲ್ಲೆಂಗಡ ಪೂವಯ್ಯ ಮತ್ತು ಯಶೋಧ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪತಿ ಸಹಕಾರಿಗಳಾದ ಕೊಕ್ಕಂಡ ಬಿದ್ದಪ್ಪ, ಹಿರಿಯ ಮಗ ಋತ್ವಿಕ್ ಬೋಪಣ್ಣ ಎಂ.ಎನ್.ಸಿ ಕಂಪನಿಯಲ್ಲಿ ಮತ್ತು ಸೊಸೆ ರಚಿತ ಬೆಂಗಳೂರಿನ ಇನ್ಫೋಸಿಯಸಿನಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಮಗ ಗವಿನ್ ಪೊನ್ನಣ್ಣ ಹೈಕೋರ್ಟ್ ವಕೀಲರಾಗಿ ಬೆಂಗಳೂರಿನಲ್ಲಿ ವೃತ್ತಿನಿರತರಾಗಿದ್ದಾರೆ. ಪ್ರಸ್ತುತ ಇವರು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಾಮಾಜಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಈ ಸಂದರ್ಭದಲ್ಲಿ ಹಾರೈಸುತ್ತದೆ.