ಕೊಡಗಿನಲ್ಲಿ ಆರ್.ಎಸ್.ಎಸ್; ಮೊದಲ ಹೆಜ್ಜೆಯ ಆ ದಿನಗಳು (ಕಾವೇರಿ ನಾಡಿನ ಸಂಘಯಾತ್ರೆ: ಭಾಗ -1)
ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು, ವಿಶೇಷವಾಗಿ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಆರಂಭವಾದ ಸಂಘ 99 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ 2025ರ ವಿಜಯ ದಶಮಿಯಂದು 100 ವರ್ಷಗಳನ್ನು ಸಂಪೂರ್ಣಗೊಳಿಸಲಿದೆ.
ಸಂಘಗಳು ಅಣಬೆಗಳಂತೆ ಹುಟ್ಟುತ್ತವೆ ಸಾಯುತ್ತವೆ ಆದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹುಟ್ಟಿ ವಿಶ್ವವ್ಯಾಪಿಯಾಗಿ ಬೆಳೆದಿರುತ್ತದೆ ಏಕೆಂದರೆ ಇದನ್ನು ಹುಟ್ಟು ಹಾಕಿದಂತಹ ವ್ಯಕ್ತಿಗಳ ಮನೋಬಲವೇ ಅದರ ಉದ್ದೇಶವು ದೇಶಪ್ರೇಮ ವಾಗಿರುತ್ತದೆ. ರಾಷ್ಟ್ರಪ್ರೇಮ ವಾಗಿರುತ್ತದೆ. ಹಾಗಾಗಿ 1925 ರ ವಿಜಯದಶಮಿಯಂದು ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್ .ಎಸ್. ಎಸ್.) ಇದೀಗ ಶತಮಾನದ ಹೊಸ್ತಿಲಲ್ಲಿದೆ. ಈ ಸಂದರ್ಭದಲ್ಲಿ ಕೊಡಗಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ನಡೆದು ಬಂದ ಹಾದಿ, ಸ್ಥಾಪಿಸಿದ ಮೈಲಿಗಲ್ಲುಗಳನ್ನು ಜ್ಞಾಪಿಸಿಕೊಳ್ಳೋಣ.
ಕೊಡಗಿನಲ್ಲಿ 1947-48 ರ ಸಮಯದಲ್ಲಿ ಆರ್.ಎಸ್.ಎಸ್ ಬಗೆಗಗಿನ ವಿಷಯಗಳು ಜನಮನಗಳಲ್ಲಿ ವಿಚಾರ ವಿನಿಮಯ ಆಗತೊಡಗುತ್ತಿದ್ದವು. ಆ ಕಾಲಘಟ್ಟದಲ್ಲಿ ಮಂಗಳೂರಿನಿಂದ ಕೊಡಗಿನ ವೀರಾಜಪೇಟೆ ಪಟ್ಟಣಕ್ಕೆ ಪೋಸ್ಟ್ ಮಾಷ್ಟರ್ ಆಗಿ ವರ್ಗಾವಣೆಗೊಂಡು ಬಂದ, ಮಂಗಳೂರಿನಲ್ಲಿ ಸಂಘದ ಒಡನಾಟವಿಟ್ಟುಕೊಂಡಿದ್ದ, ಶಣೈ ಎಂಬವರ ಮಗ ವಿನಾಯಕ ಶಣೈರವರು ವಿರಾಜಪೇಟೆಯಲ್ಲಿ ತಮಗೆ ಪರಿಚಯವಿದ್ದ ಮಿತ್ರರನ್ನು ಒಟ್ಟುಗೂಡಿಸಿ ಸಂಘದ ಬಗೆಗಿನ ಆಸಕ್ತಿಯನ್ನು ಮೂಡಿಸಿದರು. 1948ರಲ್ಲಿ ವಿರಾಜಪೇಟೆಯ ಸ್ಥಳೀಯ ಕೆಲವೊಂದು ಕುಟುಂಬಗಳ ಸಹಕಾರದೊಂದಿಗೆ ಸಣ್ಣ ಮಟ್ಟದಲ್ಲಿ ಸಂಘದ ಶಾಖೆಯೊಂದನ್ನು ಪ್ರಾರಂಭಿಸಿದರು. ಆ ಶಾಖೆಯಲ್ಲಿ ಸೇರುತ್ತಿರುವ ಸದಸ್ಯರ ಶಿಸ್ತು, ಸಂಯಮ, ರೀತಿ- ನೀತಿ, ನಡವಳಿಕೆಗಳನ್ನು ನೋಡುತ್ತಿದ್ದ ಇತರರು ದಿನದಿಂದ ದಿನಕ್ಕೆ ಆಕರ್ಷಿತಗೊಂಡು ಸ್ವಯಂಸೇವಕರಾಗಿ ಸೇರತೊಡಗಿದರು. ಅಷ್ಟರಲ್ಲಿ ಆರ್. ಎಸ್.ಎಸ್ ಬಗ್ಗೆಗಿನ ಜನರ ಅಭಿಪ್ರಾಯಗಳು ಹೊಸ ಉತ್ಸಾಹದೆಡೆಗೆ ಚಿಗುರೊಡೆಯತೊಡಗಿದವು.
1958ರ ಸುಮಾರಿಗೆ ಕೃ.ನರಹರಿ ಎಂಬವರು ಆರ್.ಎಸ್.ಎಸ್.ನ ಕೊಡಗು ವಿಭಾಗದ ಮೊದಲ ಪ್ರಚಾರಕ್ಕಾಗಿ ನಿಯುಕ್ತಿಗೊಂಡರು. ಅವರ ಸಮ್ಮುಕದಲ್ಲಿ ಮಡಿಕೇರಿಯ ಗದ್ದುಗೆಯಲ್ಲಿ 1958 ಆಗಸ್ಟ್ ತಿಂಗಳ 29ನೇ ತಾರೀಖು ಶುಕ್ರವಾರ, ‘ರಕ್ಷಾ ಬಂಧನ’ ದಿನದಂದು ಶಾಖೆ ಅಧಿಕೃತವಾಗಿ ಆರಂಭಗೊಂಡಿತು. ಅಲ್ಲಿಂದ ವಿವಿಧ ಮಜಲುಗಳಲ್ಲಿ ತನ್ನ ಆಯಾಮವನ್ನು ವಿಸ್ತರಿಸಿಕೊಂಡು ಇದೀಗ ಬೃಹತ್ ಆಲದ ಮರವಾಗಿ ನಿಂತಿದೆ. ಸಂಘದ ಕಾರ್ಯಕರ್ತರು ರಾಷ್ಟ್ರಸೇವೆಗೆ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಾ, ಕೊಡಗಿನ ತಾಯಿ ಕಾವೇರಿಯ ಆಶೀರ್ವಾದದೊಂದಿಗೆ ತಮ್ಮ ರಾಷ್ಟ್ರಸೇವಾ ಕಾರ್ಯ ಚಟುವಟಿಕೆಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಆರ್.ಎಸ್.ಎಸ್. ಪ್ರಥಮ ಜಿಲ್ಲಾ ಪ್ರಚಾರಕರಾಗಿದ್ದ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೃ.ನರಹರಿಯವರನ್ನು ಕೊಡಗಿನಲ್ಲಿ ಆರ್.ಎಸ್.ಎಸ್. ಪ್ರಾರಂಭದ ಬಗ್ಗೆ “ರಾಷ್ಟ್ರಜಾಗೃತಿ” ಪತ್ರಿಕೆಯು 15-03-2017ರಲ್ಲಿ ಅವರನ್ನು ಸಂದರ್ಶಿಸಿದಾಗ ನೀಡಿದ ಮಾಹಿತಿಯನ್ನು ಕೃ.ನರಹರಿ ಅವರ ಮಾತಿನಲ್ಲಿಯೇ ಕೇಳೋಣ….
“1958ರಲ್ಲಿ ನಾನು ಮೊದಲ ಸಲ ಕೊಡಗಿನ ಪ್ರಚಾರಕನಾಗಿ ಆಗಮಿಸಿದ್ದಾಗ ಪ್ರತಿ-ನಿತ್ಯ ಮಡಿಕೇರಿಯ ಸೀನಿಯರ್ ಕಾಲೇಜಿನ ತಲಾ 10 ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಂಘದ ಬಗ್ಗೆ ಮಾಹಿತಿ, ಸಂಘ ಸ್ಥಾಪನೆಯ ಉದ್ದೇಶ, ಮುಂದೆ ಸಂಘಗಳ ಶಾಖೆಗಳ ಪ್ರಾರಂಭ, ಮುಂದಿರುವ ಸವಾಲುಗಳು, ಸಂಘದ ಜವಾಬ್ದಾರಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ಬಂದೆ. ಈ ರೀತಿ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಸಂಪರ್ಕಿಸುತ್ತಾ ಸತತ ಮೂರು ತಿಂಗಳುಗಳ ಕಾಲ ಸಂಪರ್ಕ ಸಂಘಟನೆಗೆ ಒತ್ತು ಕೊಡುತ್ತಾ ಬಂದೆ.
1958ರ ಆಗಸ್ಟ್ ತಿಂಗಳ 29 ನೇ ತಾರೀಖು ಶುಕ್ರವಾರ ರಕ್ಷಾಬಂಧನದ ದಿನದಂದು 7ಜನ ಸ್ವಯಂ ಸೇವಕರೊಂದಿಗೆ ಕೊಡಗಿನ ಮಡಿಕೇರಿಯ ಗದ್ದುಗೆಯಲ್ಲಿ ಅಧಿಕೃತವಾದ ಮೊದಲ ಆರ್. ಎಸ್.ಎಸ್.ನ ಸಂಘ ಶಾಖೆಯು ಪ್ರಾರಂಭಗೊಂಡಿತು. ಮಾರನೆಯ ದಿನ 25ಜನ ಸ್ವಯಂಸೇವಕರು, ತದ ನಂತರ ಸಂಖ್ಯೆ ಅಧಿಕವಾಗತೊಡಗಿತು.
ನಂತರ ಪುತ್ತೂರಿನಿಂದ ಕಾನ್ಬೈಲ್ ತೋಟಕ್ಕೆ ಗುಮಾಸ್ತನಾಗಿ ಬಂದಿದ್ದ ವೆಂಕಟಯ್ಯನವರು ಕಾನ್ಬೈಲ್ ಶಾಖೆಯನ್ನು ಪ್ರಾರಂಭಿಸುವ ಬಗ್ಗೆ ನನ್ನನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಸಂಘದ 2ನೇ ಶಾಖೆಯನ್ನು ಕಾನ್ಬೈಲ್ ತೋಟದಲ್ಲಿ ಗುಂಡುಕುಟ್ಟಿ ಮಂಜುನಾಥಯ್ಯನವರ ಸಹಕಾರದೊಂದಿಗೆ ಪ್ರಾರಂಭಿಸಿದೆ. ಈ ಕಾನ್ಬೈಲ್ ಶಾಖೆಯ ಮುಖ್ಯ ಶಿಕ್ಷಕರಾಗಿ ರಾಘವಾಚಾರ್ ನಿಯುಕ್ತಗೊಳ್ಳುತ್ತಾರೆ. ಆ ಸಮಯದಲ್ಲಿ 40 ರಿಂದ 60ರಷ್ಟು ಸ್ವಯಂಸೇವಕರು (ಹೆಚ್ಚಿನವರು ಕಾರ್ಮಿಕರೇ) ಪ್ರತಿ ನಿತ್ಯ ಸಂಘದ ಶಾಖೆಯಲ್ಲಿ ಭಾಗವಹಿಸುತ್ತಿದ್ದರು.
ನಂತರದ ದಿನಗಳಲ್ಲಿ ಹರದೂರು, ಸುಂಟಿಕೊಪ್ಪ, ಸೋಮವಾರಪೇಟೆ, ವಿರಾಜಪೇಟೆ, ಮುಂತಾದ ಕಡೆ ಸಂಘದ ಶಾಖೆಗಗಳು ಪ್ರಾರಂಭವಾದವು. ಆ ಸಮಯದಲ್ಲಿ ನನ್ನೊಂದಿಗೆ ಕೊಡಗಿನವರಾದ ನಂಜು ಅಮ್ಮಯ್ಯ, ಪೆಮ್ಮಯ್ಯ, ಲೋಕಯ್ಯ ನಾಯಕ್, ಶಿವಕುಮಾರ್, ತಿಮ್ಮಯ್ಯ, ಸದಾನಂದ, ಸುಬ್ರಾಯ ಭಟ್, ಮುಂತಾದ ಸ್ವಯಂ ಸೇವಕರು ಜೊತೆಗಾರರಾಗಿದ್ದರು.
ನಾನು ಕೊಡಗಿನ ಪ್ರಚಾರಕನಾಗಿ ಜವಾಬ್ದಾರಿ ನಿರ್ವಹಿಸುವ ಸಂದರ್ಭ 1959ರಲ್ಲಿ 2ನೇಯ ಸರಸಂಘ ಚಾಲಕರಾಗಿದ್ದ ಗೋಲ್ವಲ್ಕರ್ ಗುರೂಜಿಯವರು ಮಂಗಳೂರಿನಿಂದ ಮಡಿಕೇರಿಯ ಮೂಲಕ ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಮಡಿಕೇರಿಯ ಕೆಲವು ಮೈಲುಗಳ ದೂರದಲ್ಲಿ ಗುರೂಜಿಯವರ ವಾಹನ ಅಪಘಾತಕ್ಕೀಡಾಗುತ್ತೆ. ಆಗ ಗುರೂಜಿಯವರು ಒಂದು ದಿನದ ಮಟ್ಟಿಗೆ ಕಾನ್ಬೈಲ್ನ ಗುಂಡುಕುಟ್ಟಿ ಮಂಜುನಾಥಯ್ಯನವರ ತೋಟದ ಮನೆಯಲ್ಲಿ ತಂಗುತ್ತಾರೆ. ಆ ಸಂದರ್ಭದಲ್ಲಿ ಮಡಿಕೇರಿಯ ಸಂಘದ ಶಾಖೆಗೆ ಭೇಟಿ ನೀಡಿರುತ್ತಾರೆ. ”
ಸಂಘದ ಕೊಡಗಿನ ಮೊದಲ ಪ್ರಚಾರಕರಾದ ಶ್ರೀ ಕೃ. ನರಹರಿಯವರ ಕಿರು ಪರಿಚಯ ಮಾಡುವುದು ಸಂದರ್ಭೋಚಿತವಾದೀತು.
(ಸಂಘದ ಕೊಡಗಿನ ಮೊದಲ ಪ್ರಚಾರಕರಾದ ಪ್ರೊ. ಕೃ.ನರಹರಿ)
ಪ್ರೊ. ಕೃ.ನರಹರಿಯವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (KRMSS®) ದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರು ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು ಮತ್ತು 1984-2002 ರವರೆಗೆ 18 ವರ್ಷಗಳ ಕಾಲ ಕರ್ನಾಟಕ ರಾಜ್ಯ ಶಾಸಕಾಂಗ ಮಂಡಳಿಯ ಸದಸ್ಯರಾಗಿದ್ದರು. ಅವರು 1984-2000 ರವರೆಗೆ ಕೆ.ಆರ್.ಎಂ.ಎಸ್.ಎಸ್. ಮತ್ತು 20 ವರ್ಷಗಳಿಗೂ ಹೆಚ್ಚು ಕಾಲ ಅಖಿಲ ಭಾರತ ಶಿಕ್ಷಕರ ಸಂಘಟನೆಯಾದ ಎ.ಬಿ.ಆರ್.ಎಸ್.ಎಂ.ನ ಅಧ್ಯಕ್ಷರಾಗಿದ್ದರು. ಅವರು ಬರೆದ ‘ ಎ ವಿಷನ್ ಅಂಡ್ ಡೈರೆಕ್ಷನ್ ಟು ಎಜುಕೇಶನ್ ‘ ಪುಸ್ತಕವು ಮೆಚ್ಚುಗೆ ಪಡೆದಿದೆ ಮತ್ತು ಅನೇಕ ಆವೃತ್ತಿಗಳನ್ನು ಕಂಡಿದೆ.
ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಕೃ. ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ, ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. Holidayಯನ್ನು Holydayಯಾಗಿ ಪರಿಗಣಿಸಿ ಹಗಲಿರುಳು ಶ್ರಮಿಸಿದವರು ಪ್ರೊ. ಕೃ. ನರಹರಿಯವರು.
ಕೊಡಗಿನಲ್ಲಿ ಆರ್.ಎಸ್.ಎಸ್. ನಡೆದು ಬಂದ ಹಾದಿಯ ಬಗ್ಗೆ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣನವರನ್ನು ಸಂದರ್ಶಿಸಿ ಮಾಹಿತಿ ಕಲೆಕಾಕಿದ ಸಂದರ್ಭ “ಸಂಘ ಕಾರ್ಯದಲ್ಲಿ ಕೃ.ನರಹರಿಯವರು ತಮಗೆ ಪ್ರೇರಣೆ” ಎಂದು ನೆನಪಿಸಿಕೊಂಡರು.
“ಮಾರ್ಗ ಬದಲಿಸದೆ ಹೆಜ್ಜೆ ಹಾಕಿದಲ್ಲಿ ಗುರಿ ಮುಟ್ಟುವುದು ನಿಶ್ಚಯ. ದೇವರು ಕೊಡಗಿನ ಸ್ವಯಂಸೇವಕ ಬಂದುಗಳಿಗೆ ಹಾಗೂ ಕೊಡಗಿನ ಜನತೆಗೆ ಮಾನಸಿಕ ಶಕ್ತಿ, ಇಚ್ಛಾಶಕ್ತಿ, ಬುದ್ಧಿಶಕ್ತಿ ಹಾಗೂ ಕ್ರಿಯಾಶಕ್ತಿಗಳನ್ನು ನೀಡಲೆಂದು ಹಾರೈಸುತ್ತೇನೆ.” ಎಂದು ಕೊಡಗಿನಲ್ಲಿ ಆರ್.ಎಸ್.ಎಸ್. ನಡೆದು ಬಂದ ಹಾದಿಯ ಬಗ್ಗೆಗಿನ ಸಂದರ್ಶನದ ಸಂದರ್ಭ ಹಾರೈಸಿದರು.
ಮುಂದುವರೆಯುವುದು….
“ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ”