ಶಾಲಾ ದಿನಗಳು ಮುಗಿದು ರಜೆಯ ಆಗಮನವಾಗುತ್ತಿದ್ದಂತೆ, ಪೋಷಕರಿಗೆ ಏಪ್ರಿಲ್-ಮೇ ತಿಂಗಳ ಬೇಗೆಯ ಜೊತೆಗೆ ಮಕ್ಕಳನ್ನು ನಿಭಾಯಿಸುವ ಸವಾಲು ಎದುರಾಗುತ್ತದೆ. ಅದರಲ್ಲೂ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಆ ಗ್ಯಾಜೆಟ್ ಪ್ರಪಂಚದಿಂದ ಹೊರತರುವುದು ದುಸ್ತರ. ಇಂತಹ ಸಂದರ್ಭದಲ್ಲಿ, ಬಾಲಗೋಕುಲದಂತಹ ತರಗತಿಗಳು ಮತ್ತು ಬೇಸಿಗೆ ಶಿಬಿರಗಳು ಪೋಷಕರಿಗೆ ಒಂದು ಆಶಾಕಿರಣವಾಗಿವೆ.
ಬಾಲಗೋಕುಲ ಎಂದರೇನು?
“ಬೆಳೆಯುವ ಪೈರು ಮೊಳಕೆಯಲ್ಲಿಯೇ” ಎಂಬಂತೆ, ಮಕ್ಕಳಲ್ಲಿ ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಬಾಲಗೋಕುಲದ ಮುಖ್ಯ ಉದ್ದೇಶ. ಪಠ್ಯೇತರ ಚಟುವಟಿಕೆಗಳ ಮೂಲಕ ಹೊಸ ತಲೆಮಾರುಗಳನ್ನು ರೂಪಿಸುವ ಈ ಪರಿಕಲ್ಪನೆಯು, ಮಕ್ಕಳಲ್ಲಿ ಶುದ್ಧ ಚಾರಿತ್ರ್ಯ, ನಿಷ್ಕಲ್ಮಶ ಪ್ರೀತಿ, ಹಿರಿಯರಿಗೆ ಗೌರವ ಮತ್ತು ಪ್ರಬಲ ರಾಷ್ಟ್ರ ಪ್ರೇಮದಂತಹ ಆದರ್ಶ ಗುಣಗಳನ್ನು ಬೆಳೆಸುತ್ತದೆ. ಜೊತೆಗೆ, ಆದರ್ಶ ಜೀವನ ನಿರ್ವಹಣೆ, ಮಾತೃಭಾಷೆಯ ಮೇಲಿನ ಅಭಿಮಾನ, ನಾಯಕತ್ವದ ಅನಾವರಣ ಮತ್ತು ಸೃಜನಶೀಲತೆಯೊಂದಿಗೆ ಪ್ರತಿದಿನವನ್ನು ಆನಂದಮಯವಾಗಿ ಕಳೆಯುವ ಕೌಶಲ್ಯಗಳನ್ನು ಕಲಿಸುತ್ತದೆ.
ಬಾಲಗೋಕುಲವು ಒಂದು ಮಕ್ಕಳ ಸಂಘಟನೆಯಾಗಿದ್ದು, 9ನೇ ತರಗತಿಯವರೆಗಿನ ಹೆಣ್ಣು ಮತ್ತು ಗಂಡು ಮಕ್ಕಳನ್ನು ಒಳಗೊಂಡಿರುತ್ತದೆ. ಜಾತಿ, ಮತ, ಧರ್ಮ, ಸಮುದಾಯದ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಇಲ್ಲಿ ಅವಕಾಶವಿದೆ. ನಂದಗೋಕುಲದಲ್ಲಿ ಶ್ರೀಕೃಷ್ಣ ಮತ್ತು ಬಲರಾಮರು ತಮ್ಮ ನಿಷ್ಕಲ್ಮಶ ಬಾಲ್ಯದ ಲೀಲೆಗಳನ್ನು ತೋರುತ್ತಾ ಸಾಮಾನ್ಯ ಮಕ್ಕಳಿಂದ ಅಸಾಮಾನ್ಯ ದೈವತ್ವಕ್ಕೆ ಏರಿದಂತೆ, ಬಾಲಗೋಕುಲವು ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಶ್ರವಣ ಕುಮಾರನ ಮಾತೃ-ಪಿತೃ ಭಕ್ತಿ, ಏಕಲವ್ಯನ ಗುರುಭಕ್ತಿ, ಅಭಿಮನ್ಯುವಿನ ಪರಾಕ್ರಮ, ಕರ್ಣನ ದಾನಶೂರತೆ, ಹನುಮಂತನ ಸ್ವಾಮಿ ನಿಷ್ಠೆ, ಭಕ್ತ ಪ್ರಹ್ಲಾದನ ದೈವ ಭಕ್ತಿ ಮತ್ತು ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರಂತಹ ಆಡಳಿತಗಾರತಿ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವರಂತಹ ಹೋರಾಟಗಾರತಿಯರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ, ಅವರಂತೆ ಬೆಳೆಯಲು ಪ್ರೇರೇಪಿಸಲಾಗುತ್ತದೆ. “ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಃ” (ಎಲ್ಲರೂ ಸುಖವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ) ಎಂಬ ಸಂಸ್ಕೃತ ವಾಕ್ಯದಂತೆ, ಎಲ್ಲರೂ ಕ್ಷೇಮವಾಗಿ ಮತ್ತು ಸಂತೋಷವಾಗಿರಲಿ ಎಂದು ಆಶಿಸುವಂತಹ ಸಮಾಜವನ್ನು ನಿರ್ಮಿಸುವುದು ಬಾಲಗೋಕುಲದ ಆಶಯವಾಗಿದೆ.
ಈ ಪರಿಕಲ್ಪನೆಯು 1970 ರ ದಶಕದಲ್ಲಿ ಕೇರಳದಲ್ಲಿ ಶ್ರೀ ಕೃಷ್ಣನ್ ರವರಿಂದ ಪ್ರಾರಂಭಿಸಲ್ಪಟ್ಟಿತು. ಅವರು ಒಬ್ಬ ಸ್ವಯಂಸೇವಕರು, ಸಾಮಾಜಿಕ ಚಿಂತಕರು ಮತ್ತು ವಾಗ್ಮಿಗಳಾಗಿದ್ದರು. ಇಂದು, ಇದು ರಾಷ್ಟ್ರೀಯ ಸಾಂಸ್ಕೃತಿಕ ಚಳುವಳಿಯಾಗಿ ಬೆಳೆದಿದೆ. ಸುಸಂಸ್ಕೃತ ಕುಟುಂಬಗಳ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವುದು ಬಾಲಗೋಕುಲದ ಅಂತಿಮ ಗುರಿಯಾಗಿದೆ. ಬಾಲಗೋಕುಲವು ವಿಶ್ವದ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಮಕ್ಕಳ ಸಾಂಸ್ಕೃತಿಕ ಸಂಘಟನೆಯಾಗಿದೆ.
ಬಾಲಗೋಕುಲದ ಮಹತ್ವ:
ಸಾಂಸ್ಕೃತಿಕ ಜಾಗೃತಿ: ಬಾಲಗೋಕುಲವು ಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅರಿವು ಮೂಡಿಸುತ್ತದೆ. ಇದು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮೌಲ್ಯಗಳ ಬೆಳವಣಿಗೆ: ಬಾಲಗೋಕುಲವು ಮಕ್ಕಳಿಗೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಲಿಸುತ್ತದೆ. ಇದು ಉತ್ತಮ ನಡತೆ, ಪ್ರಾಮಾಣಿಕತೆ, ದಯೆ ಮತ್ತು ಇತರ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ವ್ಯಕ್ತಿತ್ವ ವಿಕಾಸ: ಬಾಲಗೋಕುಲವು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸುತ್ತದೆ. ಇದು ಅವರ ಒಟ್ಟಾರೆ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಾಮಾಜಿಕ ಕೌಶಲ್ಯಗಳು: ಬಾಲಗೋಕುಲವು ಮಕ್ಕಳಿಗೆ ಇತರರೊಂದಿಗೆ ಬೆರೆಯಲು ಮತ್ತು ಸಹಕರಿಸಲು ಕಲಿಸುತ್ತದೆ. ಇದು ಸಾಮಾಜಿಕ ಸಾಮರಸ್ಯ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುತ್ತದೆ.
ಶೈಕ್ಷಣಿಕ ಬೆಂಬಲ: ಬಾಲಗೋಕುಲವು ಶಾಲಾ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಒದಗಿಸುತ್ತದೆ. ಇದು ಮಕ್ಕಳ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
‘ಬೆಳೆಯುವ ಪೈರು ಮೊಳಕೆಯಲ್ಲಿಯೇ ತನ್ನ ಗುಣವನ್ನು ತೋರಿಸುತ್ತದೆ’. ಅಂತೆಯೇ ವ್ಯಕ್ತಿಗಳು ಭವಿಷ್ಯದಲ್ಲಿ ಏನಾಗುತ್ತಾರೆ ಎಂಬುದನ್ನು ತಮ್ಮ ಬಾಲ್ಯದಿಂದಲೇ ಪ್ರಕಟಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಬಾಲಗೋಕುಲದಂತಹ ತರಗತಿಗಳು ಮತ್ತು ಬೇಸಿಗೆ ಶಿಬಿರಗಳು ಪೋಷಕರಿಗೆ ಒಂದು ಆಶಾಕಿರಣವಾಗಿವೆ.
…. ಕಾನತ್ತಿಲ್ ರಾಣಿ ಅರುಣ್