‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’:

ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

ಬುದ್ಧ ಪೂರ್ಣಿಮೆಯನ್ನು ಕೇವಲ ಬೌದ್ಧರಷ್ಟೆ ಅಲ್ಲದೆ, ದೇಶಾದ್ಯಂತ ಇರುವ ಎಲ್ಲಾ ಸಮುದಾಯದ ಜನರು ಸಂಭ್ರಮದಂದ ಆಚರಿಸುವಂತ ಹಬ್ಬ. ಬುದ್ಧನಿಗೆ ಸಂಬಂಧಿಸಿದ ಮೂರು ಮಹತ್ವಪೂರ್ಣ ತಿಥಿಗಳು ಏಕಕಾಲಕ್ಕೆ ಬರುವುದು ಸಹ ಬುದ್ಧ ಪೂರ್ಣಿಮೆಯ ವಿಶೇಷವಾಗಿದೆ. ಭಗವಾನ್ ಬುದ್ಧನ ಜನ್ಮ, ಜ್ಞಾನ ಪ್ರಾಪ್ತಿ ಮತ್ತು ಮಹಾಪರಿನಿರ್ವಾಣಗಳು ಒಂದೇ ದಿನ ಬರುತ್ತವೆ. ಅಂದರೆ, ಇವೆಲ್ಲವೂ ವೈಶಾಖ ಪೂರ್ಣಿಮಾ ದಿನವೇ ಆಗಿದ್ದವು. ಕ್ರಿ.ಪೂ.563ರ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧನ ಜನನವಾಗಿತ್ತು.

ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ. 16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ರಾಹುಲ ಎಂದು ಹೆಸರನಿಟ್ಟು ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ. ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬುದ್ಧಿಗೆ ಇರುವ ಇನ್ನೊಂದು ಹೆಸರು ‘ಬುದ್ಧ’. ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕವಾದುದನ್ನು, ಅತಾರ್ಕಿಕವಾದುದನ್ನು ಆತ ಏನನ್ನೂ ಹೇಳಲಿಲ್ಲ. ಅತಿಮಾನುಷವಾದವನ್ನು ಮುಂದಿಡಲಿಲ್ಲ. ‘ಬುದ್ಧ ಪೂರ್ಣಿಮಾ’ ಎಂದೂ ಕರೆಯಲ್ಪಡುವ ‘ಬುದ್ಧ ಜಯಂತಿ’ ಭಗವಾನ್ ಬುದ್ಧನ ಹುಟ್ಟುಹಬ್ಬವನ್ನು ಆಚರಿಸುತ್ತದೆ. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡಾ ನೆನಪಿಸುತ್ತದೆ. ಇದು ಅತ್ಯಂತ ಪವಿತ್ರ ಬೌದ್ಧ ಉತ್ಸವ.

ಬುದ್ಧ ತನ್ನನ್ನು ಪ್ರವಾದಿಯೋ ದೇವರ ಪ್ರತಿನಿಧಿಯೋ ಎಂದು ಬಿಂಬಿಸಿಕೊಳ್ಳಲಿಲ್ಲ. ತನ್ನದು ದೈವವಾಣಿಯೆಂದೋ ನನ್ನ ಮಾತೇ ಕೊನೆಯ ಮಾತು, ನನ್ನ ತರುವಾಯ ಮತ್ತೊಬ್ಬ ಬುದ್ಧನಿಲ್ಲ ಎಂದು ಹೇಳಲಿಲ್ಲ. ತನ್ನ ವಿಚಾರಗಳನ್ನು ಚರ್ಚೆಗೆ ಮುಕ್ತವಾಗಿ ತೆರೆದಿಟ್ಟ. ಉರಿಯುತ್ತಿರುವ ದೀಪವೊಂದು ಸಾವಿರ ದೀಪಗಳನ್ನು ಬೆಳಗಿಸಿ, ಪ್ರಕಾಶ ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಖುಷಿಯನ್ನು ಸಹ ಹಂಚುವುದರಿಂದ ಅದು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಬುದ್ಧ ಹೇಳುತ್ತಾನೆ.

ಸತ್ಯ, ಅಹಿಂಹೆ, ಸುಳ್ಳು ಹೇಳದಿರುವುದು, ಕಳ್ಳತನಮಾಡಬಾರದು ಆತನ ಮಹತ್ವದ ಉಪದೇಶ. ಸಕಲ ಪ್ರಾಣಿಗಳಲ್ಲಿ ದಯೆಯಿರಲಿ, ಪ್ರಾಣಿಹಿಂಸೆ ಮಾಡಬೇಡಿ, ಆಸೆಯೇ ದುಃಖಕ್ಕೆ ಕಾರಣ, ಹಿಂಸೆ ದ್ವೇಷವೇ ದುಃಖದ ಮೂಲ, ಎಲ್ಲರನ್ನೂ ಪ್ರೀತಿಸಿ, ಎಂದು ಸಾರುತ್ತಾ ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ 80 ವರ್ಷಗಳಷ್ಟು ದೀರ್ಘ ಕಾಲ ಎಲ್ಲೆಡೆಯೂ ಧರ್ಮಪ್ರಚಾರಮಾಡಿದ ಮಹಾಪುರುಷ ” ಗೌತಮ ಬುದ್ಧ “.

ಎಲ್ಲ ಮತಗಳು ಈ ಲೋಕವನ್ನು ‘ಆಗಿರುವ ವಸ್ತು’ ಪ್ರಪಂಚವೆಂದು ಹೇಳಿದರೆ ಬೌದ್ಧಧರ್ಮ ಮಾತ್ರ ಲೋಕವನ್ನು ‘ಆಗುತ್ತಲೇ ಇರುವ’ ನಿರಂತರ ಪ್ರವಾಹವೆಂದು ವಿವರಿಸುತ್ತದೆ. ಬುದ್ಧ ಪ್ರವಾದಿ ಅಲ್ಲ. ಆತ ಮಹಾತ್ಮ. ಆತ ಹೇಳಿದ್ದು ಧರ್ಮವೇ ವಿನಾ ಮತಧರ್ಮ ಅಲ್ಲ. ಆತನದು ಆಗಿರುವ ಮತವಲ್ಲ, ಪ್ರತಿದಿನವೂ ಆಗುತ್ತಲೇ ಇರುವ– ಕಾಲದಿಂದ ಕಾಲಕ್ಕೆ ತನ್ನನ್ನು ಪುನರ್ ಕಟ್ಟಿಕೊಳ್ಳುತ್ತಿರುವ ಧರ್ಮ.

ಬುದ್ಧನ ಅನುಸಾರ, ಕೆಟ್ಟದ್ದನ್ನು ಕೆಟ್ಟದ್ದರಿಂದಲೇ ಅಂತ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಟ್ಟದ್ದನ್ನು ಸಹ ಪ್ರೀತಿಯಿಂದಲೇ ಅಂತ್ಯಗೊಳಿಸುವುದು ಉತ್ತಮ. ಪ್ರೀತಿ-ವಿಶ್ವಾಸ ಮಾತ್ರ ಕೆಟ್ಟದ್ದಕ್ಕೆ ಇತಿಶ್ರೀ ಹಾಡಲು ಸಾಧ್ಯ. ಸಿದ್ಧಾರ್ಥನ ಮನಸ್ಸು ಬುದ್ಧನಾಗುವುದಕ್ಕೆ ಹಾತೊರೆಯುತ್ತಿದ್ದ ದಿನ ಬಂದಾಗ ಆತನ ವಯಸ್ಸು 26. ಆ ವಯಸ್ಸಿನಲ್ಲೇ ಮನೆ-ಮಠ, ಹೆಂಡತಿ-ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದಕೆಳಗೆ ಕುಳಿತು ಧ್ಯಾನಾಸಕ್ತನಾದ. ಅನವರತ ಬಿಡದೇ 47 ದಿವಸಗಳ ಕಠಿಣ ತಪಸ್ಸುಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.

ಈ ಲೋಕದಲ್ಲಿ ಯಾವುದೂ ಸ್ವತಂತ್ರ ವಸ್ತುಗಳಲ್ಲ. ಎಲ್ಲವೂ ಸಹ ಬದಲಾಗುತ್ತಿರುವ ಸಂಯೋಜನೆಗಳು ಎಂದು ಹೇಳಿದ. ಬುದ್ಧ ‘ಕಾರ್ಯಕಾರಣ’ ಸಂಬಂಧದ ಜಗತ್ತಿನ ಘಟನೆಗಳನ್ನು ವಿವರಿಸುತ್ತಾನೆ. ಆದ್ದರಿಂದ ‘ಬುದ್ಧ ಧರ್ಮ’ ಎಂಬುದು ವಿಜ್ಞಾನಕ್ಕೆ ಸಮಾನಾಂತರವಾಗಿಯೇ ಬೆಳೆಯುತ್ತದೆ. ಅದು ‘ಮತಧರ್ಮ’ಗಳಂತೆ ವಿಜ್ಞಾನಕ್ಕೆ ವಿರೋಧಿಯಲ್ಲ.
ಹಲವು ವರ್ಷಗಳ ಧ್ಯಾನ, ತಪಸ್ಸು, ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಬುದ್ಧ ಜಗತ್ತಿಗೆ ತಿಳಿಸಿದ್ದಾನೆ. ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದ ಬುದ್ಧ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ ಎನ್ನುತ್ತಾನೆ. ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ.

ಸಂದೇಹ ಅಥವಾ ಸಂಶಯ ಎನ್ನುವುದೊಂದು ಭೀಕರ ಖಾಯಿಲೆ ಎಂದು ಬುದ್ಧ ಹೇಳುತ್ತಾನೆ. ಒಬ್ಬ ವ್ಯಕ್ತಿಯ ಮನದಲ್ಲಿ ಸಂದೇಹ ಅಥವಾ ಸಂಶಯ ಎನ್ನುವುದು ಮನೆ ಮಾಡಿದರೆ, ಆತ ಅನನ್ಯ ಸಂಬಂಧಗಳನ್ನು ಶಂಕಿಸಲು ಶುರು ಮಾಡುತ್ತಾನೆ. ಇದರಿಂದ ಎಲ್ಲ ಮಧುರ ಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದಷ್ಟು, ಇಂಥ ಖಾಯಿಲೆಯಿಂದ ದೂರವಿರುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ.

ಪ್ರಾರ್ಥನೆಗೆ ಪರ್ಯಾಯವಾಗಿ ಆತ ಹೇಳುವ ‘ಧ್ಯಾನ ಮಾರ್ಗ’ ವಿಶಿಷ್ಟವಾದುದು. ಅದು ಮಾತಿನ ಲೋಕವಲ್ಲ, ಮೌನದ ಜಗತ್ತು. ಅದು ಪ್ರದರ್ಶನವಲ್ಲ, ಒಳಲೋಕದ ವಿಹಾರ. ಅಂತರಂಗದ ಪುಸ್ತಕ ತೆರೆಯದೇ, ಯಾವ ಪುಸ್ತಕ ಓದಿಯೂ ಏನೂ ಪ್ರಯೋಜನವಾಗದು ಎನ್ನುತ್ತಾನೆ ಬುದ್ಧ. ‘ಕೆಲವು ವ್ಯಕ್ತಿಗಳು ಮಾತ್ರ ಈ ಜಗತ್ತಿನಲ್ಲಿ ‘ಒಳನೋಟ’ವನ್ನು ಕಾಣಬಲ್ಲರು. ಉಳಿದಂತೆ ಎಲ್ಲರೂ ಕುರುಡರು’ ಎನ್ನುತ್ತಾನೆ.

ಮನುಷ್ಯ ಭೂತಕಾಲದ ಯೋಜನೆಯಲ್ಲಿಯೇ ಮುಳಗಬಾರದು ಎಂದು ಬುದ್ಧ ತನ್ನ ಉಪದೇಶದಲ್ಲಿ ತಿಳಿಸಿದ್ದಾನೆ. ಅವರ ಪ್ರಕಾರ, ಭವಿಷ್ಯದ ಕನಸನ್ನು ಈಡೇರಿಸಿಕೊಳ್ಳಲು ವರ್ತಮಾನದ ಕಡೆ ಗಮನ ನೀಡಿ ಎನ್ನುವುದಾಗಿತ್ತು. ಭೂತಕಾಲ ಹಾಗೂ ಭವಿಷ್ಯದ ಸ್ಥಿತಿಗತಿಗಳನ್ನು ಅರಿವಿನಲ್ಲಿಟ್ಟುಕೊಂಡು ವರ್ತಮಾನದ ಹಾದಿಯಲ್ಲಿ ನಡೆಯಬೇಕು. ಇದರಿಂದ ಮನುಷ್ಯನಿಗೆ ಸುಖ, ಸಂತೋಷದ ಮಾರ್ಗ ಲಭ್ಯವಾಗುತ್ತದೆ ಎನ್ನುವುದು ಉಪದೇಶದ ಅರ್ಥವಾಗಿತ್ತು.

ಜಗತ್ತಿನ ಮುಂದೆ ಭಾರತೀಯ ದರ್ಶನಗಳ ಅಂತಃಸತ್ವವನ್ನು ಸಮರ್ಥವಾಗಿ ಮಂಡಿಸಿದ ಸ್ವಾಮಿ ವಿವೇಕಾನಂದರು ಬೋಧಿವೃಕ್ಷದ ಅಡಿ ಕುಳಿತು ಧ್ಯಾನಾಸಕ್ತರಾಗಿ ಸಂಭ್ರಮಿಸುತ್ತಾರೆ. ‘ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಜಗ್ಗಲಿಲ್ಲ. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ನಾನು ಪ್ರಪಂಚದಲ್ಲಿ ಮತ್ತೆಂದೂ ಕಂಡಿಲ್ಲ’ ಎಂದು ಸ್ವಾಮಿ ವಿವೇಕಾನಂದ ಹೇಳುತ್ತಾರೆ.

ಬೌದ್ಧ ಧರ್ಮ ಹಾಗೂ ಬುದ್ಧನ ಉಪದೇಶ ಏನಿರಬಹುದು ಎಂಬ ಉತ್ತರವನ್ನು ಹುಡುಕುತ್ತಾ ಹೊರಟರೇ, ತಿಳಿಯುವುದನೇಂದರೆ ಬುದ್ಧನ ಬಾಳೇ(ಜೀವನ) ಆತನ ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ, ಆಶಯಗಳನ್ನು ಧಿಕ್ಕರಿಸಿದವನಲ್ಲ. ಎಂತ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು ಬಿಟ್ಟವನಲ್ಲ. ಬುದ್ಧ ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದವನೂ. ಸಮಾಜದಲ್ಲಿ ತುಡಿತಕ್ಕೊಳಗಾದವರ ಕಣ್ಣೀರ ಒರೆಸಿದನು. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದನು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದನು.

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

ಲೇಖಕರು: ✍. ಅರುಣ್ ಕೂರ್ಗ್

ಅರುಣ್‌ ಕೂರ್ಗ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments