ಸುಮಾರು 190 ವರ್ಷಗಳಿಗೂ ಹಿಂದಿನ ಮಾತು, ಕೊಡಗಿನಲ್ಲಿ ಭೀಕರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದವು. ಚಿಕಿತ್ಸೆಗಳು ಫಲಕಾರಿಯಾಗದೆ, ಜಿಲ್ಲೆಯ ಜನತೆ ವಿಚಲಿತರಾಗಿದ್ದರು. ಈ ಸಂದರ್ಭ ಧಾರ್ಮಿಕ ಮುಖಂಡರೆಲ್ಲರೂ ಒಂದೆಡೆ ಸೇರಿ ಒಂದು ನಿರ್ಧಾರವನ್ನು ಕೈಗೊಂಡರು. ರಾಜರ ಕಾಲದ 4 ಶಕ್ತಿ ದೇವತೆಗಳನ್ನು ಪಟ್ಟಣಕ್ಕೆ ಕರೆತಂದು ನಗರಾದ್ಯಂತ ಪ್ರದಕ್ಷಿಣೆ ಮಾಡಿಸುವುದು ಅವರ ನಿರ್ಧಾರವಾಗಿತ್ತು. ಪುರಾಣಗಳ ಪ್ರಕಾರ ದುಷ್ಟ ಸಂಹಾರಕ್ಕೆ ಸಿದ್ದಳಾದ ಪಾರ್ವತಿ ದೇವಿಯು ನವರಾತ್ರಿಯ ಮೊದಲ ದಿನ ದೇವಾನುದೇವತೆಗಳ ಅಣ್ಣನೆನಿಸಿಕೊಂಡಿರುವ "ಶ್ರೀಮಹಾವಿಷ್ಣು" ವಿನ ಬಳಿಗೆ ಹೋಗಿ ಆತನಿಂದ ಶಂಖ, ಚಕ್ರ, ಗಧೆ ಮುಂತಾದ ಶಸ್ತ್ರಸ್ತ್ರಾಗಳನ್ನು ಪಡೆದುಕೊಳ್ಳುತ್ತಾಳೆ. ಈ ಹಿನ್ನಲೆಯಲ್ಲಿ ನವರಾತ್ರಿಯ ಮೊದಲದಿನ ಪಾರ್ವತಿಯ ಅಂಶವೆನಿಸಿಕೊಂಡಿರುವ ಶ್ರೀ ಚೌಟಿಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಮತ್ತು ಶ್ರೀ ಕೋಟೆಮಾರಿಯಮ್ಮ ದೇವತೆಗಳು ಕರಗಕಟ್ಟಿದ ನಂತರ ಮಹಾವಿಷ್ಣುವಿನ ಸ್ಥಾನವಾದ ಪೇಟೆ ಶ್ರೀ ರಾಮ ಮಂದಿರಕ್ಕೆ ಆಗಮಿಸುವ ಮತ್ತು ನಂತರ ನವದಿನ ನಗರಪ್ರದಕ್ಷಿಣೆ ಮಾಡುವ ಸಂಪ್ರದಾಯ ಆರಂಭವಾಯಿತು. ಹತ್ತನೇಯ ದಿನ (ವಿಜಯದಶಮಿ)ದಂದು ಪೇಟೆ ಶ್ರೀ ರಾಮಮಂದಿರದಿಂದ ಸಂಜೆ 7 ಗಂಟೆಗೆ ಕಳಸ ಹೊತ್ತ ಪಲ್ಲಕಿಯು ಮೆರವಣಿಗೆ ಹೊರಟು ಮಂಗಳವಾಧ್ಯದೊಂದಿಗೆ ಮೊದಲು ಶ್ರೀ ಚೌಟಿಮಾರಿಯಮ್ಮನ ಕರಗ, ನಂತರ ಶ್ರೀ ಕಂಚಿಕಾಮಾಕ್ಷಿ ದೇಗುಲಕ್ಕೆ ತೆರಳಿ ಕರಗ ಪೂಜೆಯನ್ನು ಸ್ವೀಕರಿಸಿ ಶ್ರೀ ದಂಡಿನಮಾರಿಯಮ್ಮನ ದೇಗುಲದೆಡೆಗೆ ಸಾಗುತ್ತದೆ. ಅಲ್ಲ್ಲಿಗೆ ಅದಾಗಲೇ ಶ್ರೀ ಕೋಟೆಮಾರಿಯಮ್ಮ ದೇವಿಯ ಕರಗವು ಬಂದಿರುತ್ತವೆ, ಅಲ್ಲಿ ಪೂಜೆಯನ್ನು ಸ್ವೀಕರಿಸಿ 4 ಶಕ್ತಿ ದೇವತೆಯರ ಕರಗಗಳ ಮೆರವಣಿಗೆ ಮುಂದುವರಿಯುತ್ತದೆ. ಮಡಿಕೇರಿಯ ರಾಜರಸ್ತೆ ಎನಿಸಿದ ಮಹದೇವಪೇಟೆಯ ಮೂಲಕ ಸಾಗುವ ಮೆರವಣಿಗೆ ಗದ್ದುಗೆ ಸಮೀಪದಲ್ಲಿರುವ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ `ವಿಜಯದಶಮಿ' ಉತ್ಸವಕ್ಕೆ ಮಂಗಳ ಹಾಡಲಾಗುತಿತ್ತು. ಇವಿಷ್ಟು ಕಾರ್ಯಕ್ರಮಗಳು ಮಧ್ಯರಾತ್ರಿ 12 ಗಂಟೆಯ ಒಳಗೆ ನಡೆಯುತ್ತಿತು. ಪ್ರಪ್ರಥಮವಾಗಿ ನಡೆದ ದಸರಾ ಉತ್ಸವದ ಪುಣ್ಯದ ಫಲವೆಂಬಂತೆ ಸಾಂಕ್ರಾಮಿಕ ರೋಗ ಇನ್ನಿಲ್ಲದಂತೆ ಮಾಯವಾಯಿತು. ಇದರಿಂದ ಸಂತುಷ್ಟರಾದ ಕೊಡಗಿನ ಜನತೆ ದಸರಾ ಉತ್ಸವವನ್ನು ಸರ್ವಧರ್ಮಗಳ ಸಾಮರಸ್ಯದ ಸಂಕೇತವೆನ್ನುವಂತೆ ಕ್ರಮಬದ್ಧವಾಗಿ ಪ್ರತೀ ವರ್ಷ ಆಚರಿಸಿಕೊಂಡು ಬರುವ ನಿರ್ಧಾರವನ್ನು ಕೈಗೊಂಡಿತು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.