Kodandarama
Reading Time: 2 minutesಈ ದೇಗುಲವು ನಗರದ ಮಾರುಕಟ್ಟೆಯಿಂದ ಉತ್ತರಕ್ಕೆ ಕಾಲ್ನಡಿಗೆ ದೂರದಲ್ಲಿದೆ. ಮಡಿಕೇರಿಯ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ನಿಂಗಪ್ಪ ಎಂಬುವರು ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ಸಮಿತಿಯೊಂದನ್ನು ರಚಿಸಿ, ದಾನಿಗಳ ನೆರವಿನಿಂದ 1977 ರಲ್ಲಿ ಈ ದೇಗುಲವನ್ನು ನಿರ್ಮಿಸಿದರು. ಮೊದಲಿಗೆ ಶ್ರೀ ರಾಮನ ಚಿತ್ರಪಟವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದನ್ನು ನಿಂಗಪ್ಪನವರೇ ನಿರ್ವಹಿಸುತ್ತಿದ್ದರು. ದೇಗುಲಕ್ಕೆ ಮೂರ್ತಿಯು ಬೇಕೆನಿಸಿದಾಗ ಹತ್ತಾರು ಕಡೆ ಅಲೆದು ಕೊನೆಗೆ ಮೈಸೂರು ಅರಮನೆ ಸಮೀಪವಿರುವ ಹಾಲ್ನಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿರಾಮ ಜೊತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಆಂಜನೇಯ, ಅಲ್ಲದೆ ವಿನಾಯಕನ ವಿಗ್ರಹವನ್ನು ಕೃಷ್ಣಶಿಲೆಯಿಂದ ನಿರ್ಮಿಸಿ ತರಲಾಯಿತು. ಅದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರವಿತ್ತು. ದೇವತಾ ವಿಗ್ರಹಗಳ ಪ್ರತಿಷ್ಠಾಪನೆಯು ವಿಜ್ರಂಭಣೆÉಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲು ನಿರ್ಧರಿಸಲಾಯಿತು. ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ನಿಂಗಪ್ಪನವರು ದೇವಸ್ಥಾನವನ್ನು ಸಾರ್ವಜನಿಕರÀ ಹೆಸರಿನಲ್ಲಿ ನೋಂದಾಯಿಸಿ ಹಾಗೆಯೇ ಆಡಳಿತವನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಮ ಸೇವಾ ಸಮಿತಿಯವರಿಗೆ ವಹಿಸಿಕೊಟ್ಟರು. ನವಗ್ರಹ ಮೂರ್ತಿಗಳನ್ನೂ ಹೊಂದಿರುವ ದೇಗುಲವು ಸುಂದರವಾಗಿದೆ. ರಾಮನವಮಿ, ನವರಾತ್ರಿ, ಮುಂತಾದ ಉತ್ಸವಗಳನ್ನು ವಿಜ್ರಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.