ಕೆದಮುಳ್ಳೂರು: ವೀರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೂರಿಯಾಲ್ ಎಂಬಲ್ಲಿ ಇರುವ ಮುಲ್ಲೈರೀರ ಕುಟುಂಬದ ಮಂದ್ನಲ್ಲಿ ಪುತ್ತರಿ ಕೋಲಾಟವು ಕಳೆದ 45 ವರ್ಷದ ಬಳಿಕ ಮತ್ತೆ ಚಾಲ್ತಿಗೆ ಬಂದಿದೆ.
ಈ ಸಂದರ್ಭ ಮುಲ್ಲೈರೀರ ಒಕ್ಕಡದ ಮುಖ್ಯಸ್ಥರಾದ ಕೆ.ಕೆ. ಸುರೇಶ್ ಅಮ್ಮುಞೂ ಮಾತನಾಡಿ
ರಾಜ್ಯದ ವಿವಿಧೆಡೆ ಸುಗ್ಗಿ ಆಚರಿಸುವಂತೆ ಕೊಡಗಿನಲ್ಲಿ ಧಾನ್ಯಲಕ್ಷ್ಮಿಯನ್ನು ಮನೆಗೆ ತರುವ ಹಬ್ಬವಾಗಿ ಹುತ್ತರಿಯನ್ನು ಆಚರಿಸಲಾಗುತ್ತದೆ. ಹುತ್ತರಿ ಆಚರಣೆ ನಂತರದಲ್ಲಿ ಮರುದಿನ ಕೋಲಾಟ್, ಉಮ್ಮತ್ತಾಟ್ ಸೇರಿದಂತೆ ಇತರ ಸಾಂಪ್ರದಾಯಿಕ ನೃತ್ಯದ ಮೂಲಕ ನಮ್ಮ ಪರಂಪರೆಯನ್ನು ನೆನಪಿಸಿಕೊಳ್ಳಲಾಗುತ್ತದೆ,
ಕಾರಣಾಂತರಗಳಿಂದ 45 ವರ್ಷಗಳ ಹಿಂದೆ ನಿಂತು ಹೋಗಿದ್ದ ಪುತ್ತರಿ ಕೋಲಾಟವನ್ನು ಮುಲ್ಲೈರೀರ ಕುಟುಂಬದ ಸರ್ವಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕೂಡಿ ಮತ್ತೆ ಪುತ್ತರಿಯ ಮರುದಿನ ಇಂದು ಸಡಗರದಿಂದ ನಡೆಸಲಾಯಿತು ಎಂದು ತಿಳಿಸಿದರು.
ದೀಪ ಬೆಳಗುವುದರ ಮೂಲಕ ಕುಟುಂಬದ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಲ್ಲೈರೀರ ಕುಟುಂಬದ ಸದಸ್ಯರಿಂದ ಕೋಲಾಟ್, ಬೊಳಕಾಟ್ ನಡೆದರೆ, ಮಹಿಳೆಯರ ತಂಡದಿಂದ ಉಮ್ಮತ್ತಾಟ್ ನೃತ್ಯವು ನಡೆಯಿತು. ಈ ಪುತ್ತರಿ ಕೋಲಾಟವನ್ನು ವಿಕ್ಷೀಸಲು ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭ ನೆರೆದಿದ್ದರು.