ಚೆಪ್ಪುಡಿರ ಎಂ.ಅಪ್ಪಯ್ಯ(ಕಿರಣ್), ಸಹಕಾರಿಗಳು: ಮಾಯಮುಡಿ. Mayamudi

ಚೆಪ್ಪುಡಿರ ಎಂ.ಅಪ್ಪಯ್ಯ(ಕಿರಣ್), ಸಹಕಾರಿಗಳು: ಮಾಯಮುಡಿ. Mayamudi

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡಿರ ಎಂ. ಅಪ್ಪಯ್ಯ(ಕಿರಣ್)ನವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಯುತರ ತಂದೆ ಚೆಪ್ಪುಡಿರ ಬಿ. ಮಂದಣ್ಣನವರು ಹಿರಿಯ ಸಹಕಾರಿಗಳಾಗಿದ್ದು, ಇವರ ಸಹಕಾರ ಕ್ಷೇತ್ರದ ಕಾರ್ಯವೈಖರಿಗಳಿಂದ ಪ್ರೇರೇಪಣೆ ಗೊಂಡು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಚೆಪ್ಪುಡಿರ ಎಂ. ಅಪ್ಪಯ್ಯನವರು, ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ  2005 ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2010 ರ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ನಿರ್ದೇಶಕರಾಗಿ ಆಯ್ಕೆಗೊಂಡರು. ತದ ನಂತರ 2012ರಿಂದ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸರಿ ಸುಮಾರು 27 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21 ರಲ್ಲಿ 22.54 ಲಕ್ಷಗಳ ಲಾಭದಲ್ಲಿ ಇದೆ ಎಂದ ಚೆಪ್ಪುಡಿರ ಅಪ್ಪಯ್ಯನವರು,  ಸಂಘದ ಲಾಭಕ್ಕೆ ಗೊಬ್ಬರ ಮಾರಾಟದಲ್ಲಿ 120 ಟನ್ ಗೊಬ್ಬರ ದಾಖಲೆ ಮಾರಾಟವಾಗಿದೆ ಎಂದು ತಿಳಿಸಿದರು. ಸಂಘವು ಲಾಭದಾಯಕವಾಗಿ ನಡೆಯುವಂತಾಗಲು ಸಾಲ ಪಡೆದ ಸದಸ್ಯರು ಸರಿಯಾಗಿ ಸಕಾಲ ಸಾಲದ ಮರುಪಾವತಿ ಮಾಡಿರುವುದರಿಂದಲೂ, ಜಾಮೀನು ಸಾಲ, ಆಭರಣ ಸಾಲ, ಗೊಬ್ಬರ ಸಾಲ, ಕೆಸಿಸಿ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಪಿಗ್ಮಿ ಸಾಲ, ಸಂಘದ ಅಧೀನದಲ್ಲಿರುವ ಕಟ್ಟಡಗಳಿಂದ ಬರುವ ಬಾಡಿಗೆ ರೂಪದ ಆದಾಯ, ನ್ಯಾಯಬೆಲೆ ಅಂಗಡಿಯ ವಹಿವಾಟು, ಕೃಷಿ ಪರಿಕರಗಳ ಮಾರಾಟದಿಂದ, ಸಂಘದ ಅಧಿನದಲ್ಲಿರುವ ಟ್ಯಾಕ್ಟರ್‌ನ್ನು ಬಾಡಿಗೆ ನೀಡುತ್ತಿರುವುದರಿಂದ ಬರುವ ಆದಾಯ, ಸಂಘದ ಸಭಾಂಗಣದ ಬಾಡಿಗೆ ರೂಪದ ಆದಾಯ ಮುಂತಾದವುಗಳಿಂದ ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಇದರೊಂದಿಗೆ ಕಾಫಿ ಹಾಗೂ ಕರಿಮೆಣಸು ಅಡಮಾನ ಸಾಲ ನೀಡುತ್ತಿರುವುದಾಗಿ ಈ ಸಂದರ್ಭದಲ್ಲಿ ಮಾಹಿತಿ  ನೀಡಿದರು.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50 ಸೆಂಟು ಸ್ಥಳದಲ್ಲಿ ಹಳೆಯ ಕಚೇರಿ ಕಟ್ಟಡ ಹಾಗೂ ಗೋದಾಮುಗಳನ್ನು ಕೆಡವಿ ಮುಖ್ಯ ಕಚೇರಿ ಕಟ್ಟಡ ಹಾಗೂ ನೂತನ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದ ಚೆಪ್ಪುಡಿರ ಅಪ್ಪಯ್ಯನವರು, ತಮ್ಮ ಅಧ್ಯಕ್ಷ ಅವಧಿಯಲ್ಲಿನ ಸಂಘದ ಅಭಿವೃದ್ಧಿಯ ಕುರಿತು ಮಾತನಾಡುತ್ತಾ ನ್ಯಾಯಬೆಲೆ ಅಂಗಡಿಗೆ ನೂತನ ಕಟ್ಟಡ ಮತ್ತು ಸಂಘದ ಅಧೀನದಲ್ಲಿರು ಜಾಗದ ಹದ್ದುಬಸ್ತು ಸರ್ವೆ ಮಾಡಿಸಿ ಸಂಘದ ಆಸ್ತಿ ಗುರುತಿಸಲಾಗಿದೆ ಎಂದರು. ಸಂಘದ ಸುತ್ತ ತಡೆಗೋಡೆ ನಿರ್ಮಾಣ, ಕಾಂಕ್ರೀಟ್ ಅಂಗಳ ನಿರ್ಮಾಣ, ಆಡಳಿತ ಕಚೇರಿ ನವೀಕರಣ ಹಾಗೂ ಸಂಘದ ವ್ಯವಹಾರಗಳನ್ನು ಸಂಪೂರ್ಣ  ಡಿಜಿಟಲೀಕರಣ ಮಾಡಲಾಗಿದೆ ಎಂದು ತಿಳಿಸಿದರು. ಹಾಗೆ ಸಿಸಿಟಿವಿ ಅಳವಡಿಕೆ, ರೈತರ ಅನುಕೂಲಕ್ಕಾಗಿ ಕಾಫಿ ಔಟರ್ನ್ ಯಂತ್ರವನ್ನು ಸಂಘದ ಕಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ ತಿಳಿಸಿದರು. ಈ ಎಲ್ಲಾ ಸಂಘದ  ಕಟ್ಟಡ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಂಘದ ಆಡಳಿತ ಮಂಡಳಿಯವರ ಒಪ್ಪಿಗೆ ಪಡೆದು ನಡೆಸಿರುವುದಾಗಿ ಈ ಸಂದರ್ಭದಲ್ಲಿ ಅಪ್ಪಯ್ಯನವರು ತಿಳಿಸಿದರು.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೈಗೊಳ್ಳಲಾಗುವ ಮುಂದಿನ ಕ್ರಿಯಾಯೋಜನೆಗಳ ಬಗ್ಗೆ ವಿವರಿಸಿದ ಅಪ್ಪಯ್ಯನವರು, ಆರ್.ಎಂ.ಸಿ. ಅನುದಾನದಲ್ಲಿ ಒಂದು ಸುಸಜ್ಜಿತ ಗೋದಾಮು ನಿರ್ಮಾಣ ವ್ಯವಸ್ಥೆಗೆ ಪ್ರಯತ್ನ ಮಾಡಲಾಗುತ್ತಿದ್ದು, ಸದಸ್ಯರ ಹಾಗೂ ರೈತರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬಗ್ಗೆ ಗಮನ ಹರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಚೆಪ್ಪುಡಿರ ಅಪ್ಪಯ್ಯನವರು, ತಿಳಿಸಿದರು.

ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ ನೀಡಿ ಭತ್ತ ಕೃಷಿಗೆ ಉತ್ತೇಜನ ನೀಡಬೇಕು ಎಂದು ಅಭಿಪ್ರಾಯಪಟ್ಟ ಚೆಪ್ಪುಡಿರ ಅಪ್ಪಯ್ಯನವರು, ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಚೆಪ್ಪುಡಿರ ಅಪ್ಪಯ್ಯನವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಡಿರುವ ಚೆಪ್ಪುಡಿರ ಅಪ್ಪಯ್ಯನವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಕೃಷಿಕರಾಗಿರುವ ಚೆಪ್ಪುಡಿರ ಅಪ್ಪಯ್ಯನವರು, ತಂದೆ ಚೆಪ್ಪುಡಿರ ಬಿ.ಮಂದಣ್ಣ ಹಾಗೂ ತಾಯಿ ಮಾಚಮ್ಮ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ. ಪತ್ನಿ ಸೋನಿ ಗೃಹಿಣಿಯಾಗಿದ್ದು, ತಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಮಗಳು ಮೋನಿಷ ವ್ಯಾಸಾಂಗ ನಿರತರಾಗಿದ್ದಾರೆ.

ಚೆಪ್ಪುಡಿರ ಎಂ. ಅಪ್ಪಯ್ಯ(ಕಿರಣ್)ನವರು ಪ್ರಸ್ತುತ ಮಾಯಮುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ  ಕಲ್ತೋಡು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 25-01-2022

Search Coorg Media

Coorg’s Largest Online Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.
kodagu sahakara

Comments are closed.