ನ.3 ರಿಂದ 5ರವರೆಗೆ “ಸಿಐಟಿ”ಯಲ್ಲಿ ರಾಜ್ಯ ಮಟ್ಟದ “ಕೃಷಿ ಯಂತ್ರ ಮೇಳ-2023”

Reading Time: 3 minutes

ಪೊನ್ನಂಪೇಟೆಯ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ತಾಂತ್ರಿಕ ಶಿಕ್ಷಣ ಸಂಸ್ಥೆ ಮುಂದಿನ ಸಾಲಿಗೆ 25 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿ ‘ಬೆಳ್ಳಿ ಮಹೋತ್ಸವ’ಕ್ಕೆ ಪಾದಾರ್ಪಣೆ ಮಾಡಲಿದ್ದು, ಈ ಹಿನ್ನೆಲೆ ನ.3 ರಿಂದ 5ರವರೆಗೆ ಸಿಐಟಿಯಲ್ಲಿ ರಾಜ್ಯ ಮಟ್ಟದ ‘ಕೃಷಿ ಯಂತ್ರ ಮೇಳ-2023’ ನಡೆಯಲಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸುದ್ದಿಗೋಷ್ಠಿಯಲ್ಲಿ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಮುಕ್ಕಾಟಿರ ಕಾರ್ಯಪ್ಪ ಮಾತನಾಡಿ, 1999 ರಲ್ಲಿ ಆರಂಭಗೊಂಡ ಸಿಐಟಿ ಸಂಸ್ಥೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸುಲಭವಾಗಿ ತಾಂತ್ರಿಕ ಶಿಕ್ಷಣ ದೊರಕುವಂತೆ ಮಾಡಿದೆ. ಸಂಸ್ಥೆಯ ಬೆಳ್ಳಿ ಮಹೋತ್ಸವದ ಹಿನ್ನೆಲೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.

ಕಾಲೇಜಿನ ಉಪನ್ಯಾಸಕರಾದ ಡಾ. ರಾಮಕೃಷ್ಣ ಮಾತನಾಡಿ, ‘ಕೃಷಿ ದೇವೋಭವ’ ಘೋಷ ವಾಕ್ಯದಡಿ ಕೃಷಿ ಮೇಳ ಆಯೋಜಿತವಾಗುತ್ತಿದೆ. ಮೇಳದಲ್ಲಿ ಕೃಷಿಗೆ ಪೂರಕವಾದ ಯಂತ್ರಗಳು, ಪಂಪ್‍ಸೆಟ್ ಹೀಗೆ ಕೃಷಿಗೆ ಉಪಯುಕ್ತವಾದ ಯಂತ್ರೋಪಕರಣಗಳ 150 ರಿಂದ 200 ಮಳಿಗೆಗಳು ಪ್ರದರ್ಶಿಸಲ್ಪಡಲಿದೆ. ಈ ಮೇಳದ ಮೂಲಕ ಜಿಲ್ಲೆಯ ಕೃಷಿಕ ಬಂಧುಗಳು ಮಾರುಕಟ್ಟೆ ದರಕ್ಕಿಂತಲೂ ಕಡಿಮೆಯ ದರಕ್ಕೆ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆಯೆಂದು ತಿಳಿಸಿದರು.

ಕೃಷಿ ಮೇಳದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಮತ್ರಿಗಳು ಮತ್ತು ಕೃಷಿ ಸಚಿವರನ್ನು ಆಹ್ವಾನಿಸಲಾಗುತ್ತಿದೆಯೆಂದು ತಿಳಿಸಿದ ಅವರು, ಮೇಳದಲ್ಲಿ ಕೃಷಿಗೆ ಪೂರಕವಾದ ಚರ್ಚಾ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ. ಇದರೊಂದಿಗೆ ರೈತರ ಅನುಕೂಲಕ್ಕಾಗಿ ‘ಉಚಿತ ಮಣ್ಣು ಪರೀಕ್ಷೆ’ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಯಾಂತ್ರೀಕೃತ ಭತ್ತದ ಕೃಷಿಯ ಬಗ್ಗೆಯೂ ಮೇಳದಲ್ಲಿ ವಿಶೇಷ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರೋಪ ನ.5 ರಂದು ನಡೆಯಲಿದ್ದು, ಬಳಿಕ ಸಂಜೆ ಖ್ಯಾತನಾಮರಾದ ಪಂಡಿತ್ ಗೋಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು.

ಬಸ್ ವ್ಯವಸ್ಥೆ- ಕೃಷಿ ಮೇಳದಲ್ಲಿ ಜಿಲ್ಲೆಯ ಕೃಷಿಕರು, ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅನುಕೂಲವಾಗುಂವಂತೆ ಶಾಸಕ ಪೊನ್ನಣ್ಣ ಅವರ ಸಹಕಾರದಿಂದ ವಿರಾಜಪೇಟೆ, ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಮೈಸೂರು, ಬೆಂಗಳೂರು ಮಾರ್ಗದ ಕೆಲ ಸರ್ಕಾರಿ ಬಸ್‍ಗಳನ್ನು ಪೊನ್ನಂಪೇಟೆ ಸಿಐಟಿ ಕಾಲೇಜು ಮಾರ್ಗವಾಗಿ ತೆರಳುವ ವ್ಯವಸ್ಥೆ ಮಾಡಲಾಗಿದೆಯೆಂದು ಮಾಹಿತಿಯನ್ನಿತ್ತರು.

ಬೆಳ್ಳಿಹಬ್ಬದ ಸಂಚಾಲಕರಾದ ಕಾಲೇಜಿನ ಪ್ರೊಫೆಸರ್ ಡಾ. ರೋಹಿಣಿ ತಿಮ್ಮಯ್ಯ ಮಾತನಾಡಿ, ನ.2 ರಂದು ಸಿಐಟಿ ಕಾಲೇಜಿನಲ್ಲಿ ಬೆಳ್ಳಿಹಬ್ಬದ ‘ಲೋಗೋ’ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಗೋಣಿಕೊಪ್ಪಲು ಕಾವೇರಿ ಕಾಲೇಜಿನಿಂದ ಸಿಐಟಿ ಕಾಲೇಜಿನವರೆಗೆ 10 ಕಿ.ಮೀ. ಮ್ಯಾರಥಾನ್, ವಿರಾಜಪೇಟೆಯಿಂದ ಕಾಲೇಜಿನವರೆಗೆ ಬೈಕ್ ಜಾಥವನ್ನು ಆಯೋಜಿಸಲಾಗಿದೆಯೆಂದು ಮಾಹಿತಿಯನ್ನಿತ್ತರು.
ನವೆಂಬರ್‍ನಲ್ಲಿ ಪ್ರಾಜೆಕ್ಟ್ ಎಕ್ಸಿಬಿಷನ್, ಮುಂದಿನ ಜನವರಿಯಲ್ಲಿ ಅಂತರಾಷ್ಟ್ರೀಯ ತಾಂತ್ರಿಕ ಸಮಾವೇಶ, ಏಪ್ರಿಲ್‍ನಲ್ಲಿ ಟೆಕ್ ಫೆಸ್ಟ್, ಕಲ್ಚರಲ್ ಫೆಸ್ಟ್, ಸ್ಪೋಟ್ರ್ಸ್ ಫೆಸ್ಟ್‍ನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x