ಬದುಕಿನ ಬದಲಾವಣೆಯ ಪರ್ವಕಾಲ "ಸಂಕ್ರಾಂತಿ" – ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ "ಮಕರ ಸಂಕ್ರಾಂತಿ"

ಬದುಕಿನ ಬದಲಾವಣೆಯ ಪರ್ವಕಾಲ “ಸಂಕ್ರಾಂತಿ”

ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ “ಮಕರ ಸಂಕ್ರಾಂತಿ”

ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ್ಯ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸರಿಸುಮಾರಿಗೆ ಆಗುತ್ತದೆ.
ನಿರಯಣ ಮಕರರಾಶಿ ಎಂದರೆ…. ಡಿಸೆಂಬರ್ 21 ರಂದು ಸೂರ್ಯನು ಭಾರತೀಯ ಕಾಲಮಾನ ಸಂಜೆ 4 ಗಂಟೆ 42 ನಿಮಿಷಕ್ಕೆ ಸರಿಯಾಗಿ ಪರಮಾವಧಿ ದಕ್ಷಿಣದಲ್ಲಿರುವ ಆಯನ ಸಂಕ್ರಮಣ ಬಿಂದು (2700 ರೇಖಾಂಶ) ತಲುಪಿ, ಉತ್ತರ ದಿಕ್ಕಿಗೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಉತ್ತರ ಧ್ರುವದಲ್ಲಿ ಕ್ರಮೇಣ ಹಗಲು ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ರಾತ್ರಿ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. (ಚಳಿಗಾಲ ಪ್ರಾರಂಭ) ನಿರಯಣ ಪದ್ಧತಿಯಂತೆ ಸೂರ್ಯನು ಜನವರಿ 14 ರಂದು 2700 ರೇಖಾಂಶ ತಲುಪಿ, ಮಕರರಾಶಿ ಪ್ರವೇಶಿಸುತ್ತಾನೆ. ಆ ದಿವಸ ಮಕರ ಸಂಕ್ರಾಂತಿಯಾಗಿದ್ದು, ಉತ್ತರಾಯಣ ಪುಣ್ಯ ಕಾಲವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ಸುಗ್ಗಿ ಸಂಭ್ರಮವನ್ನು ಆಚರಿಸಲು ಈ ಹಬ್ಬ ಆಚರಿಸಲಾಗುತ್ತದೆ. ‘ಅಯನ’ದ ಆರಂಭವನ್ನು ಸೂಚಿಸುವುದಕ್ಕೆ ಹಿಂದು ಧರ್ಮದಲ್ಲಿ ಸಂಕ್ರಾಂತಿಯನ್ನು ಬಿಟ್ಟರೆ ಬೇರೆ ಹಬ್ಬವಿಲ್ಲ. ಉತ್ತರಾಯಣ ಆರಂಭವನ್ನು ಸಂಕ್ರಾಂತಿ ಸೂಚಿಸುತ್ತದೆ.

ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು, ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ.
ಸಂಕ್ರಾಂತಿ ಹಬ್ಬವನ್ನು ಮೂರು ದಿನದ ಹಬ್ಬವಾಗಿ ಆಚರಿಸುತ್ತಾರೆ. ಮೊದಲ ದಿನ ಭೋಗಿ ಹಬ್ಬ ಎಂದೂ ಕರೆಯುತ್ತಾರೆ. ಮನೆಯನ್ನೆಲ್ಲ ಶುದ್ಧಗೊಳಿಸಿ, ಬೀದಿ ಬಾಗಿಲಲ್ಲಿ ಗೋಮಯದಿಂದ ಸಾರಿಸಿ, ಬಣ್ಣಬಣ್ಣದ ರಂಗೋಲಿಯನ್ನು ಬಿಡಿಸುತ್ತಾರೆ. ದೇವತಾ ಪೂಜೆಯನ್ನು ವಿಶೇಷವಾಗಿ ಆಚರಿಸಿ ಪ್ರಸಾದ ಸ್ವೀಕರಿಸುತ್ತಾರೆ. ದೇವರಿಗೆ ಹೆಸರುಬೇಳೆಯಿಂದ ನೈವೇದ್ಯಮಾಡಿ ಸ್ವೀಕರಿಸುವ ಭೋಜ್ಯ ಪದಾರ್ಥವನ್ನು ‘ಹುಗ್ಗಿ’ ಎಂದೂ ಕರೆಯುತ್ತಾರೆ. ಹಿಂದಿನ ತಿಂಗಳಾದ ಧನುರ್ಮಾಸದಲ್ಲಿ ಪ್ರತಿದಿನವೂ ದೇವರಿಗೆ ಅರ್ಪಿಸಲ್ಪಡುವ ಭೋಜ್ಯಾದ್ರವ್ಯಕ್ಕೆ ಈ ದಿವಸ ಮಂಗಳಾರಂಭ ಸಮರ್ಪಣೆ ನಡೆಯುತ್ತದೆ.
ಸಂಕ್ರಾಂತಿ, ಹಳ್ಳಿ ಜನರಿಗೆ ಸಂಭ್ರಮಿಸುವ ದಿನ. ಹೆಂಗಳೆಯರು ಆ ದಿನದಂದು ಶೃಂಗಾರಗೊಂಡು ಎಳ್ಳು – ಬೆಲ್ಲವನ್ನು ಹಂಚುತ್ತಾರೆ. ಸೂರ್ಯ ಹುಟ್ಟುವ ಮುನ್ನವೇ ಮನೆಯನ್ನು “ನವ ವಧು” ವಿನಂತೆ ಶೃಂಗಾರ ಮಾಡುತ್ತಾರೆ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ನೋಡುಗರ ಕಣ್ಣಿಗೆ ಚಿತ್ರಲೋಕವನ್ನೇ ಕಟ್ಟಿ ಕೊಡುತ್ತಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ರೈತರು ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು”. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ.
ಸಂಕ್ರಾಂತಿಯಲ್ಲಿ ಮತ್ತೊಂದು ವಿಶೇಷವೆಂದರೆ ಗೋವುಗಳನ್ನು ಪೂಜಿಸುವುದು. ಇದನ್ನು ಹೆಚ್ಚಾಗಿ ಸಂಕ್ರಾಂತಿಯ ಮಾರನೆಯದಿನ ಆಚರಿಸುತ್ತಾರೆ. ದನಕರುಗಳಿಗೆ ಸ್ನಾನಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣಹಚ್ಚಿ ಅವುಗಳನ್ನು ಸಿಂಗರಿಸಿ, ಅವುಗಳಿಗೆ ಪ್ರಿಯವೂ, ಹಿತಕರವೂ ಆದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ಪೀಡಾ ಪರಿಹಾರಾರ್ಥವಾಗಿ ಹಾಗು ಅವುಗಳಿಗೆ ಯಾವುದೇ ರೀತಿಯ ರೋಗಭಾದೆಗಳು ಬರದಿರಲೆಂದು ಅವುಗಳನ್ನು ಉರಿಯುತ್ತಿರುವ ಬೆಂಕಿಯನ್ನು ದಾಟಿಹೋಗುವಂತೆ ಮಾಡುತ್ತಾರೆ. ಇದಕ್ಕೆ ‘ಕಿಚ್ಚು ಹಾಯಿಸುವುದು’ ಎಂದೂ ಕರೆಯುತ್ತಾರೆ.

ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿಂದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆಗೊಳಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬ ಕರೆಯಲ್ಪಡುತ್ತದೆ.
ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.
ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು “ಸಂಕ್ರಾಂತಿ” ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು. ಜಾಗತೀಕರಣವು ಇಡೀ ಜಗತ್ತನ್ನೇ ಬದಲಾಯಿಸಬಹುದು. ಆದರೆ ಹಿಂದೂ ಸಂಸ್ಕ್ರತಿಯ ಮಡಿಲಲ್ಲಿ-ಹುಟ್ಟಿ ಬೆಳೆದ ಆಚರಣೆಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿಲ್ಲ. “ಸಂಕ್ರಾಂತಿ”ಯೂ ಸರ್ವರಲ್ಲೂ ಹೊಸ ಬದಲಾವಣೆ ತರಲಿ ಎಂಬುದೆ ನಮ್ಮ ಆಶಯ.

✍. ಕಾನತ್ತಿಲ್ ರಾಣಿ ಅರುಣ್

admin

0 0 votes
Article Rating
Subscribe
Notify of
guest
0 Comments
Inline Feedbacks
View all comments